ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿನ ಕ್ರೀಡಾ ವಸತಿ ನಿಲಯಕ್ಕೆ ಮಂಗಳವಾರ ಭೇಟಿ ನೀಡಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ತಂಡ ಅವ್ಯವಸ್ಥೆಯನ್ನು ಪರಿಶೀಲಿಸಿತು
–ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆ: ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿನ ಅವ್ಯವಸ್ಥೆಯನ್ನು ಕಂಡು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ತಂಡ ಬೇಸರ ಹೊರಹಾಕಿತು. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಎಚ್ಚರಿಕೆ ನೀಡಿತು.
ಆಯೋಗದ ಸದಸ್ಯರಾದ ಕೆ.ಟಿ. ತಿಪ್ಪೇಸ್ವಾಮಿ, ಶಶಿಧರ್ ಕೋಸಂಬೆ ಹಾಗೂ ಶೇಖರಗೌಡ ರಾಮತ್ನಾಳ ನೇತೃತ್ವದ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು. ಅನೈರ್ಮಲ್ಯ, ಹಾಲು, ಮಾಂಸ ಸೇರಿದಂತೆ ಆಹಾರ ಪದಾರ್ಥವನ್ನು ಎಲ್ಲೆಂದರಲ್ಲಿ ಬಿಸಾಡಿದ್ದು ಕಣ್ಣಿಗೆ ರಾಚಿತು.
‘ಕ್ರೀಡಾ ಹಾಸ್ಟೆಲ್ನ ಅವ್ಯವಸ್ಥೆ ಕಂಡು ಬೇಸರಗೊಂಡಿದ್ದೇವೆ. ನಿಯಮಾನುಸಾರ ಹಣ್ಣು, ಮೊಟ್ಟೆ, ಮಾಂಸಾಹಾರ ಜ್ಯೂಸ್ ನೀಡುತ್ತಿಲ್ಲ ಎಂಬುದು ಖಚಿತವಾಗಿದೆ. ಈ ಕುರಿತು ಕ್ರೀಡಾ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯುತ್ತೇವೆ’ ಎಂದು ಶಶಿಧರ್ ಕೋಸಂಬೆ ಮಾಹಿತಿ ನೀಡಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ಸ್ಕ್ಯಾನಿಂಗ್ಗೆ ಬಹುಹೊತ್ತಿನಿಂದ ಸರತಿ ಸಾಲಿನಲ್ಲಿ ನಿಂತಿದ್ದನ್ನು ಆಯೋಗದ ಸದಸ್ಯರು ಗಮನಿಸಿದರು. 3 ಸ್ಕ್ಯಾನಿಂಗ್ ಯಂತ್ರಗಳನ್ನು ಒಂದೇ ಕೊಠಡಿಯಲ್ಲಿಟ್ಟು ಪಿಸಿಪಿಎನ್ಡಿಟಿ ಕಾಯ್ದೆ ಉಲ್ಲಂಘನೆ ಮಾಡಿರುವುದನ್ನು ಪತ್ತೆಹಚ್ಚಿತು. ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಬಿಸಿಯೂಟಕ್ಕೆ ಪೂರೈಕೆ ಮಾಡಿರುವ ತೊಗರಿ ಬೇಳೆಯನ್ನು ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.