ADVERTISEMENT

ಅಂತಿಮ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ತರಗತಿ

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 12:23 IST
Last Updated 18 ನವೆಂಬರ್ 2020, 12:23 IST
ಪ್ರೊ. ಶರಣಪ್ಪ ವಿ. ಹಲಸೆ
ಪ್ರೊ. ಶರಣಪ್ಪ ವಿ. ಹಲಸೆ   

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳು ಆರಂಭಿಸಲಾಗಿದ್ದು, ಉಳಿದವರಿಗೆ ಆನ್‍ಲೈನ್‍ನಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.

ಸರ್ಕಾರ ಮತ್ತು ಯುಜಿಸಿ ಸೂಚನೆಯಂತೆ ಅಂತಿಮ ವರ್ಷದ ಅಂದರೆ ಸ್ನಾತಕ ಪದವಿಯ 5ನೇ ಹಾಗೂ ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್‌ಗಳಿಗೆ ಮಾತ್ರ ಭೌತಿಕ ಹಾಗೂ ಆನ್‍ಲೈನ್ ತರಗತಿ ನಡೆಸಲಾಗುವುದು. ಯಾವ ಮಾಧ್ಯಮದಲ್ಲಿ ಪಾಠ ಕೇಳಬೇಕು ಎಂಬುದನ್ನು ವಿದ್ಯಾರ್ಥಿಗಳೇ ನಿರ್ಧರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಯ ಪ್ರಮಾಣ ಪತ್ರ, ಪಾಲಕರ ಅನುಮತಿ ಮತ್ತು ವೈಯಕ್ತಿಕ ನಡವಳಿ ಪತ್ರವನ್ನು ವಿಭಾಗಕ್ಕೆ ಸಲ್ಲಿಸುವುದು ಕಡ್ಡಾಯ. ಅಲ್ಲದೆ, ಪ್ರಾಧ್ಯಾಪಕರೂ ವೈದ್ಯಕೀಯ ತಪಾಸಣಾ ಪತ್ರ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಸ್ನಾತಕೋತ್ತರ ಪದವಿಯ ಪ್ರಥಮ ಸೆಮಿಸ್ಟರ್ ಹಾಗೂ ಸ್ನಾತಕ ಪದವಿಯ ಪ್ರಥಮ ಮತ್ತು ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಮಾತ್ರ ಪಾಠ ಮುಂದುವರಿಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳು ತಮಗೆ ಬೇಕಾದ ಮಾಹಿತಿ ಅಥವಾ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂಚಿತವಾಗಿ ಅನುಮತಿ ಪಡೆದು ವಾರದಲ್ಲಿ ಒಮ್ಮೆ ಮಾತ್ರ ಕಾಲೇಜಿಗೆ ಹೋಗಿ ಬರಲು ಅನುಮತಿ ನೀಡಲಾಗುವುದು. ಇದಕ್ಕೂ ಪಾಲಕರ ಒಪ್ಪಿಗೆ ಪತ್ರ ಸಲ್ಲಿಸಬೇಕು ಎಂದು ಕುಲಪತಿ ಹೇಳಿದ್ದಾರೆ.

*

ವಿಡಿಯೊ, ಆಡಿಯೊ, ಮಲ್ಟಿಮೀಡಿಯಾ, ಯೂಟ್ಯೂಬ್‌, ಪಾಡ್‍ಕಾಸ್ಟ್ ಸೇರಿ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಅಧ್ಯಯನ ಪೂರಕ ಮಾಹಿತಿ ಒದಗಿಸಲಾಗುವುದು.

– ಪ್ರೊ. ಶರಣಪ್ಪ ವಿ. ಹಲಸೆ, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.