ಸಂತೇಬೆನ್ನೂರು: ವಿಧಾನಸಭಾ ಚುನಾವಣೆಗೆ ಭದ್ರತೆ ಒದಗಿಸಲು ಕಳೆದ ತಿಂಗಳಿನಿಂದ ಇಲ್ಲಿನ ಎಸ್ಎಸ್ ಜೆವಿಪಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನೆಲೆಸಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಯೋಧರು ಭಾನುವಾರ ಶಾಲಾ ಆವರಣದ ಸ್ವಚ್ಛತೆ ಕೈಗೊಂಡರು.
ಚುನಾವಣೆಯ ಮುಗಿದ ಕಾರಣ ವಿಶ್ರಾಂತಿ ಸಮಯದಲ್ಲಿ ಸಾಮಾಜಿಕ ಸೇವೆಯ ಅಂಗವಾಗಿ ಪೊದೆಗಳಂತೆ ಬೆಳೆದ ಕಳೆ, ಪ್ಲಾಸ್ಟಿಕ್ ತ್ಯಾಜ್ಯ, ಒಣ ಹುಲ್ಲನ್ನು ಸ್ವಚ್ಛಗೊಳಿಸಿದರು.
ಬಾಡಿದ ಗಿಡ-ಮರಗಳಿಗೆ ಗುಣಿ ಮಾಡಿದರು. ಬೇಸಿಗೆ ರಜೆ ನಿಮಿತ್ತ ಮೈದಾನದಲ್ಲಿ ಕಸ ಚೆಲ್ಲಿತ್ತು. ಅದನ್ನು ಸ್ವಚ್ಛಗೊಳಿಸಿದರು.
ಜಾರ್ಖಂಡ್ ರಾಜ್ಯದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು ಚುನಾವಣಾ ಭದ್ರತೆಗಾಗಿ ನಿಯೋಜಿಸಲಾಗಿದೆ. ಕಮಾಂಡರ್ ನೇತೃತ್ವದಲ್ಲಿ 100 ಯೋಧರು ಸುಗಮ ಚುನಾವಣೆಗೆ ಶ್ರಮಿಸಿದ್ದರು.
ಕಾರ್ಯದ ಜತೆ ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್ ಆಡಿ ಗಮನ ಸೆಳೆದರು.
‘ಮೇ 20ರವರೆಗೆ ಕರ್ತವ್ಯ ನಿರ್ವಹಿಸಲಿದ್ದೇವೆ. ಕರ್ನಾಟಕದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಶಾಂತಿ ನೆಲೆಸಿದೆ. ಚುನಾವಣೆಯಲ್ಲಿ ಸಣ್ಣ-ಪುಟ್ಟ ಗಲಭೆಗಳನ್ನು ಹೊರತುಪಡಿಸಿ ಸುಗಮ ಮತದಾನ ನಡೆಯಿತು. ಗ್ರಾಮದ ಜನರು ಶಾಂತಿಪ್ರಿಯರು, ಸ್ನೇಹಿಗಳು, ಭಾಷೆ ತೊಡಕು ಬಿಟ್ಟರೆ ಸಮಯವನ್ನು ಚೆನ್ನಾಗಿ ಕಳೆದೆವು’ ಎಂದು ಯೋಧ ಬಿ.ಎಸ್. ಬಲಿಯಾನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.