ADVERTISEMENT

ಸಾಮಾನ್ಯ ತಿಳಿವಳಿಕೆ ಜ್ಞಾನಕ್ಕಿಂತ ಹೆಚ್ಚು: ಡಾ. ಬಸವರಾಜಪ್ಪ

ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 3:05 IST
Last Updated 20 ಅಕ್ಟೋಬರ್ 2021, 3:05 IST
ದಾವಣಗೆರೆ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ತಂತ್ರಜ್ಞಾನ ಶಿಕ್ಷಣದಲ್ಲಿ ಆಧುನಿಕ ಶಿಕ್ಷಣ ಪರಿಕರಗಳನ್ನು ಬಳಸಿ ಬೋಧನಾ ಕಲಿಕಾ ಕೌಶಲ ಸಬಲೀಕರಣ’ ಕುರಿತ ಎರಡು ವಾರಗಳ ಕಾರ್ಯಾಗಾರವನ್ನು ಸೋಮವಾರ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕುಲಸಚಿವ ಡಾ. ಎಸ್. ಬಸವರಾಜಪ್ಪ ಉದ್ಘಾಟಿಸಿದರು.
ದಾವಣಗೆರೆ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ತಂತ್ರಜ್ಞಾನ ಶಿಕ್ಷಣದಲ್ಲಿ ಆಧುನಿಕ ಶಿಕ್ಷಣ ಪರಿಕರಗಳನ್ನು ಬಳಸಿ ಬೋಧನಾ ಕಲಿಕಾ ಕೌಶಲ ಸಬಲೀಕರಣ’ ಕುರಿತ ಎರಡು ವಾರಗಳ ಕಾರ್ಯಾಗಾರವನ್ನು ಸೋಮವಾರ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕುಲಸಚಿವ ಡಾ. ಎಸ್. ಬಸವರಾಜಪ್ಪ ಉದ್ಘಾಟಿಸಿದರು.   

ದಾವಣಗೆರೆ: ಆಧುನಿಕ ಜಗತ್ತಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಜ್ಞಾನ, ವಿಜ್ಞಾನ ಬೇಕೇ ಬೇಕು. ಜೀವನದಲ್ಲಿ ಯಶಸ್ಸು ಗಳಿಸಬೇಕಿದ್ದರೆ ಜ್ಞಾನಕ್ಕಿಂತಲೂ ಸಾಮಾನ್ಯ ತಿಳಿವಳಿಕೆ ಹಾಗೂ ಬುದ್ಧವಂತಿಕೆ ಅಗತ್ಯ ಎಂದು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕುಲಸಚಿವ ಡಾ. ಎಸ್. ಬಸವರಾಜಪ್ಪ ತಿಳಿಸಿದರು.

ಅಖಿಲ ಭಾರತಿಯ ತಾಂತ್ರಿಕ ಶಿಕ್ಷಣ ಪರಿಷತ್ ಮತ್ತು ಯು.ಬಿ.ಡಿ.ಟಿ. ಎಂಜಿನಿಯರಿಂಗ್ ಕಾಲೇಜಿನ ಯಾಂತ್ರಿಕ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ತಂತ್ರಜ್ಞಾನ ಶಿಕ್ಷಣದಲ್ಲಿ ಆಧುನಿಕ ಶಿಕ್ಷಣ ಪರಿಕರಗಳನ್ನು ಬಳಸಿ ಬೋಧನಾ ಕಲಿಕಾ ಕೌಶಲ ಸಬಲೀಕರಣ’ ಕುರಿತು ಪ್ರಾಧ್ಯಾಪಕರಿಗೆ ಹಮ್ಮಿಕೊಳ್ಳಲಾದ ಎರಡು ವಾರಗಳ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ, ‘ಸಕಾರಾತ್ಮಕ ಚಿಂತನೆ, ಸೃಜನಶೀಲ ವ್ಯಕ್ತಿತ್ವ, ವಾಕ್ ಸಾಮರ್ಥ್ಯ, ಸಮಸ್ಯೆ ಪರಿಹರಿಸುವ ತಂತ್ರಗಾರಿಕೆ ಮುಂತಾದ ಕೌಶಲಗಳನ್ನು ಮೈಗೂಡಿಸಿಕೊಂಡು ಮಾದರಿ ಶಿಕ್ಷಕರಾಗಬೇಕು. ಕಲಿಕೆಯ ಅನುಭವ, ಗುರಿ ತಲುಪುವ ಶ್ರಮ, ಹೊಸ ಜ್ಞಾನದ ವರ್ತನೆ ಮತ್ತು ಕೌಶಲಗಳು ಕೆಲವು ಭಾರಿ ವಿರುದ್ಧವಾಗಿ ಇರುವುದೂ ಇರುತ್ತದೆ. ಕಲಿಕೆ ಮತ್ತು ಬೋಧನೆ ಈ ರೀತಿ ಚಂಚಲವಾಗಿರುವುದನ್ನೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಡಾ. ಈರಮ್ಮ ಎಚ್. ಮಾತನಾಡಿ, ‘ಬೋಧನಾ ತತ್ವದ ಕಲಿಕೆಯ ಕಲೆ ಮತ್ತು ಸೈದ್ಧಾಂತಿಕ ಪರಿಕಲ್ಪನೆಯನ್ನು ಶಿಕ್ಷಕರು ಪಾಲಿಸಬೇಕು’ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ದೇಶದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 50ಕ್ಕೂ ಅಧಿಕ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯ ಸದಸ್ಯ ಡಾ. ಎಚ್.ಆರ್. ಪ್ರಭಾಕರ್ ಉಪಸ್ಥಿತರಿದ್ದರು. ರೇಖಾ ಪದಕಿ ಪ್ರಾರ್ಥಿಸಿದರು ಸಹ ಪ್ರಾಧ್ಯಾಪಕರಾದ ಡಾ.ಎಂ. ಪ್ರಸನ್ನ ಕುಮಾರ್, ಡಾ. ಕೆ.ಜಿ. ಸತಿಶ್, ಅಣ್ಣಪ್ಪ ಎ.ಆರ್. ಅತಿಥಿಗಳನ್ನು ಪರಿಚಯಿಸಿದರು. ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ. ಈರಪ್ಪ ಸೋಗಲದ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಡಾ. ಶೇಖರಪ್ಪ ಬಿ. ಮಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಚ್. ದಿವಾಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.