ADVERTISEMENT

ಸ್ಮಾರ್ಟ್‌ಸಿಟಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ: ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:45 IST
Last Updated 15 ಫೆಬ್ರುವರಿ 2020, 14:45 IST
ದಾವಣಗೆರೆ ಸ್ಮಾರ್ಟ್‌ಸಿಟಿ ಅಡಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ರಿಂಗ್‌ರಸ್ತೆ ಮತ್ತು ಅದಕ್ಕೆ ಸೇರುವ ಇತರ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ ನೀಡಿದರು
ದಾವಣಗೆರೆ ಸ್ಮಾರ್ಟ್‌ಸಿಟಿ ಅಡಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ರಿಂಗ್‌ರಸ್ತೆ ಮತ್ತು ಅದಕ್ಕೆ ಸೇರುವ ಇತರ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ ನೀಡಿದರು   

ದಾವಣಗೆರೆ: ಕೇಂದ್ರ ಸರ್ಕಾರದಿಂದ ಸ್ಮಾರ್ಟ್‌ಸಿಟಿ ಯೋಜನೆಗೆ ಬಂದಿರುವ ಅನುದಾನವನ್ನು ಬಳಸಿಕೊಂಡು ತ್ವರಿತಗತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ದಾವಣಗೆರೆ ಸ್ಮಾರ್ಟ್‌ಸಿಟಿ ಅಡಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ರಿಂಗ್‌ರಸ್ತೆ ಮತ್ತು ಅದಕ್ಕೆ ಸೇರುವ ಇತರ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಹಂತ-1, ಪಾದಚಾರಿ ರಸ್ತೆ ಅಭಿವೃದ್ಧಿ -2ನೇ ಹಂತದ ಕಾಮಗಾರಿಗಳಿಗೆ ನಗರದ ಶಾರದಾಂಬ ಸರ್ಕಲ್ ಹತ್ತಿರ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರದಿಂದ ₹ 400 ಕೋಟಿ ಅನುದಾನ ಬಂದಿದ್ದು, ₹ 100 ಕೋಟಿ ಮಾತ್ರ ಖರ್ಚಾಗಿದೆ. ಬಸ್‌ಸ್ಟ್ಯಾಂಡ್ ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷ ಕಳೆದರು ಪೂರ್ಣಗೊಂಡಿಲ್ಲ. ಮಂಡಿಪೇಟೆಯಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಇ–ಟೆಂಡರ್ ವ್ಯವಸ್ಥೆ ಇರುವುದರಿಂದ ಬೇರೆ ಊರಿನವರು ಟೆಂಡರ್ ಪಡೆಯುತ್ತಾರೆ. ಇದರಿಂದಾಗಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದರು.

ADVERTISEMENT

ಒಂದನೇ ಹಂತದ ಕಾಮಗಾರಿಯು ರಿಂಗ್‌ರಸ್ತೆ ಮತ್ತು ಅದಕ್ಕೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಯನ್ನು ಹೊಂದಿದೆ. ಅಕ್ತರ್ ರಜಾ ಜಂಕ್ಷನ್‌ನಿಂದ ಶಾಮನೂರ್ ಜಂಕ್ಷನ್ ವರೆಗೆ 6,580 ಮೀಟರ್ ಉದ್ದದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇದರಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ, ಮಳೆನೀರು, ಚರಂಡಿ, ಪಾದಚಾರಿ ರಸ್ತೆ, ವಿದ್ಯುತ್ ಕಂಬಗಳು, ರಸ್ತೆಯ ಬದಿಯ ಗಿಡ ನೆಡುವುದು ಈ ಎಲ್ಲಾ ವಿಷಯವನ್ನು ಈ ಕಾಮಗಾರಿ ಹೊಂದಿದೆ ಎಂದರು.

2ನೇ ಹಂತದ ಕಾಮಗಾರಿಯಲ್ಲಿ ಹದಡಿ ರಸ್ತೆ, ಶಾಮನೂರು ರಸ್ತೆ, ಗುರುಭವನ ರಸ್ತೆ, ಕರಡಗಿ ವೀರಭದ್ರಪ್ಪ ರಸ್ತೆ, ಬ್ರಾಹ್ಮಣ ವಿದ್ಯಾರ್ಥಿ ನಿಲಯದ ರಸ್ತೆ, ಹಳೇ ಪಿ.ಬಿ ರಸ್ತೆ ಸೇರಿ ಒಟ್ಟು 6,910 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ವಿವರ ನೀಡಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ‘ಚೌಕಿಪೇಟೆ ಮತ್ತು ಮಂಡಿಪೇಟೆಗಳಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಕಾಮಗಾರಿಯ ವೇಗವಾಗಿ ನಡೆಯಲು ಎಲ್ಲಾರ ಸಹಕಾರ ಅಗತ್ಯ. ಸತತವಾಗಿ ಕೆಲಸ ಮಾಡುವ ಮೂಲಕ ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಮುಗಿಸಬೇಕು’ ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿದೇರ್ಶಕ ರವೀಂದ್ರ ಮಲ್ಲಾಪುರ, ಮುಖ್ಯ ಎಂಜಿನಿಯರ್ ಸತೀಶ್, ಗುತ್ತಿಗೆದಾರ ಉದಯ್ ಶಿವಕುಮಾರ್, ಮುಖಂಡರಾದ ಉಮೇಶ್ ಪಟೇಲ್, ಕಾಂತರಾಜ್, ಸಿದ್ದೇಶ್ ಕೋಟ್ಹಾಳ್, ರಮೇಶ್, ಗೌರಮ್ಮ ಪಟೇಲ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.