ADVERTISEMENT

ಸ್ವಾರ್ಥಕ್ಕಾಗಿ ಕಾಂಗ್ರೆಸ್ ಧರಣಿ: ಶಾಸಕ ರೇಣುಕಾಚಾರ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 5:45 IST
Last Updated 21 ಫೆಬ್ರುವರಿ 2022, 5:45 IST
 ಹೊನ್ನಾಳಿಯ ತಮ್ಮ ನಿವಾಸದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. 
 ಹೊನ್ನಾಳಿಯ ತಮ್ಮ ನಿವಾಸದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.    

ಹೊನ್ನಾಳಿ: ಹುಬ್ಬಳ್ಳಿಯ ಕಿತ್ತೂರು ರಾಣಿ (ಈದ್ಗಾ ಮೈದಾನ ವಿವಾದ) ಚನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುತ್ತಾ ಬಂದವರ ಮೇಲೆ ಗುಂಡು ಹೊಡೆದ ಕಾಂಗ್ರೆಸ್ ಸರ್ಕಾರ ಈಗ ವಿರೋಧ ಪಕ್ಷದಲ್ಲಿ ಕುಳಿತು, ರಾಷ್ಟ್ರಧ್ವಜ ಹಿಡಿದು ಸದನದ ಒಳಗೆ ಪ್ರತಿಭಟನೆ ಮಾಡುತ್ತಿರುವುದು ರಾಷ್ಟ್ರಧ್ವಜಕ್ಕೆ ಮಾಡುತ್ತಿರುವ ಅಪಮಾನಕರ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

‘ಹಿಂದೂಗಳು ತಮ್ಮ ತಾಯಿಯ ಎದೆಹಾಲು ಕುಡಿದಿದ್ದರೆ ಶ್ರೀನಗರದ ಲಾಲ್‍ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಲಿ ಎಂದು ಉಗ್ರಗಾಮಿಗಳು ಸವಾಲು ಹಾಕಿದಾಗ ಅಂದಿನ ಕಾಂಗ್ರೆಸ್ ಸರ್ಕಾರ ಸವಾಲು ಸ್ವೀಕರಿಸಿಲಿಲ್ಲ. ಅವರ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ಕೊಡಲಿಲ್ಲ. ಬಿಜೆಪಿಯ ಹಿರಿಯ ಮುಖಂಡ ಮುರುಳಿ ಮನೋಹರ್ ಜೋಷಿ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರು ಶ್ರೀನಗರದ ಲಾಲ್‍ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ನಾವು ಭಾರತಾಂಬೆಯ ಮಕ್ಕಳು. ನಾವು ನಮ್ಮ ತಾಯಿಯ ಎದೆ ಹಾಲು ಕುಡಿದಿದ್ದೇವೆ ಎಂದು ತೋರಿಸಿಕೊಟ್ಟಿದ್ದೇವೆ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಪರವಾಗಿ ಹಾಗೂ ದೇಶಕ್ಕಾಗಿ ಎಂದೂ ಧರಣಿ ನಡೆಸಲಿಲ್ಲ. ಬದಲಾಗಿ ಒಬ್ಬ ವ್ಯಕ್ತಿಯ ಸಲುವಾಗಿ ಸ್ವಾರ್ಥಕ್ಕಾಗಿ ಧರಣಿ ನಡೆಸುತ್ತಿರುವುದು ಖಂಡನೀಯ. ಸದನ ನಡೆಸುತ್ತಿರುವುದು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸುವುದಕ್ಕೆ. ಕಾಂಗ್ರೆಸ್‍ನವರು ಮಾತ್ರ ಸದನದಲ್ಲಿ ಸುಖಾಸುಮ್ಮನೆ ಧರಣಿ ನಡೆಸಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ’ ಎಂದು ರೇಣುಕಾಚಾರ್ಯ ಕಿಡಿಕಾರಿದರು.

ADVERTISEMENT

‘ಅರಿಶಿಣ, ಕುಂಕುಮ, ಬಳೆ, ಸೀರೆ ನಮ್ಮ ಹಿಂದೂ ಸಂಸ್ಕೃತಿಯ ಧ್ಯೋತಕ. ಸಾವಿರಾರು ವರ್ಷಗಳಿಂದ ಮಹಿಳೆಯರು ಅವುಗಳನ್ನು ಧರಿಸುತ್ತ ಬಂದಿದ್ದಾರೆ. ಅವುಗಳು ಆಲಂಕಾರಿಕ ವಸ್ತುಗಳಲ್ಲ. ಈ ಬಗ್ಗೆ ಅಲ್ಪಸಂಖ್ಯಾತರು ಲಘುವಾಗಿ ಮಾತನಾಡುವುದು ಸರಿಯಲ್ಲ. ಈ ವಿಚಾರದಲ್ಲಿ ಟೀಕೆ ಮಾಡಬೇಡಿ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೆ ಕೊಡಲಿಲ್ಲ. ಅವರಿಗೆ ಹಿಂದೂ ಸಂಸ್ಕೃತಿಗಿಂತ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ರಾಜಕಾರಣ ಮುಖ್ಯ ಎನ್ನಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಚಿವ ಕೆ.ಎಸ್. ಈಶ್ವರಪ್ಪನವರು ಯಾವ ತಪ್ಪು ಮಾಡಿಲ್ಲ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಬಾಬು ಹೋಬಳದಾರ್, ಹರಳಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ, ಹತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾರಿಕೊಪ್ಪ ಹನುಮಂತಪ್ಪ, ಸುರೇಂದ್ರನಾಯ್ಕ, ಪೇಟೆ ಪ್ರಶಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.