ADVERTISEMENT

ಶ್ರೇಷ್ಠ ಮಾನವ ಸಂಪನ್ಮೂಲ ಭಾರತದ ಕೊಡುಗೆ;ತೇಜಸ್ವಿನಿ ಅನಂತಕುಮಾರ್

ಆದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 3:06 IST
Last Updated 2 ಆಗಸ್ಟ್ 2021, 3:06 IST
ತೇಜಸ್ವಿನಿ ಅನಂತಕುಮಾರ್
ತೇಜಸ್ವಿನಿ ಅನಂತಕುಮಾರ್   

ದಾವಣಗೆರೆ: ಪ್ರಜಾಪ್ರಭುತ್ವದ ಬಲವರ್ಧನೆ, ಉತ್ತಮ ನಾಯಕತ್ವ ಮತ್ತು ಸರಿಯಾದ ನೀತಿ, ನಿರೂಪಣೆಗಳಿಂದ ಜಾಗತಿಕವಾಗಿ ಭಾರತ ಬಲಾಢ್ಯ ರಾಷ್ಟ್ರವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಅಭಿಪ್ರಾಯಪಟ್ಟರು.

ದಾವಣಗೆರ ವಿಶ್ವವಿದ್ಯಾಲಯದಲ್ಲಿ ನಡೆದ ‘ಆಜಾದಿ ಕಾ ಅಮೃತ್ ಮಹೋತ್ಸವ್‌’ ಕಾರ್ಯಕ್ರಮವನ್ನು ವರ್ಚುವಲ್ ವೇದಿಕೆ ಮುಖಾಂತರ ಉದ್ವಾಟಿಸಿ ಮಾತನಾಡಿದರು.

‘ವಿದೇಶೀಯರ ಆಕ್ರಮಣದಿಂದ ನಮ್ಮ ವಿಚಾರಧಾರೆಯನ್ನು ಘಾಸಿಗೊಳಿಸುವ ಹಲವಾರು ಘಟನೆಗಳು ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿದ್ದರೂ ಇಡೀ ವಿಶ್ವಕ್ಕೆ ಶ್ರೇಷ್ಠ ಮಾನವ ಸಂಪನ್ಮೂಲವನ್ನು ಭಾರತ ಕೊಡುಗೆಯಾಗಿ ನೀಡಿರುವುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

‘ಪ್ರತಿಯೊಬ್ಬರ ಸಹಭಾಗಿತ್ವ, ಪಾಲುದಾರಿಕೆಯಿಂದ ಮಾತ್ರ ಸಮಾಜ ಮತ್ತು ಪ್ರಕೃತಿಯಲ್ಲಿ ಆಗುತ್ತಿರುವ ಅಸಮತೋಲನವನ್ನು ತಹಬದಿಗೆ ತರಲು ಸಾಧ್ಯ’ ಎಂದರು.

ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರಿ ನಿರ್ದೇಶಕ ಡಾ. ಗೋಪಾಲಕೃಷ್ಣ ಜೋಶಿ ಮಾತನಾಡಿ ‘ಸ್ವಾತಂತ್ರ್ಯದ ನಂತರದ ಅಭಿವೃದ್ಧಿ ಕಾರ್ಯಗಳು ಹಾಗೂ 21ನೇ ಶತಮಾನದಲ್ಲಿ ಭಾರತದಲ್ಲಿ ಆಗುತ್ತಿರುವ ಬೆಳವಣಿಗಳಿಂದ ಇಡೀ ವಿಶ್ವವೇ ಭಾರತವನ್ನು ಗೌರವದಿಂದ ಕಾಣಲಾಗುತ್ತಿದೆ’ ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನಮ್ಮ ಪೂರ್ವಿಕರು ಸ್ವಾತಂತ್ರ್ಯ ಪಡೆಯಲು ನಡೆಸಿದ ಹೋರಾಟ, ತ್ಯಾಗ ಮತ್ತು ಬಲಿದಾನಗಳು ಯುವಜನರ ಪ್ರೇರೇಣೆ ಮತ್ತು ಸ್ಫೂರ್ತಿ ನೀಡುವ ಉದ್ದೇಶದಿಂದ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಭಾರತೀಯನು ಜಾತಿ, ವರ್ಣ, ಭೇದಗಳಿಂದ ಹೊರಬಂದು ಭಾರತದ ಸರ್ವತೋಮುಖ ಬೆಳವಣಿಗೆಗಾಗಿ ತೊಡಗಿಸಿಕೊಳ್ಳುವುದರಿಂದ ಭಾರತ ವಿಶ್ವಗುರುವಾಗಿ ಹೊರಹೊಮ್ಮಲು ಸಾಧ್ಯವಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ರಾಜ್ಯ ನೋಡಲ್ ಅಧಿಕಾರಿ ಕೆ. ಪ್ರಸನ್ನಕುಮಾರ, ಸಿಂಡಿಕೇಟ್ ಸದಸ್ಯ ಡಾ. ಶ್ರೀಧರ್ ಎಸ್, ಡಾ.ಜೆ.ಪಿ. ರಾಮನಾಥ ಮಾತನಾಡಿದರು.

ಸಿಂಡಿಕೇಟ್ ಸದಸ್ಯರಾದ ಗೀತಾ ಜಿ. ಮಲ್ಲಿಕಾರ್ಜುನ ಮಾಡಾಳ್, ವಿಜಯಲಕ್ಷ್ಮಿ ಹಿರೇಮಠ, ಪವನ್ ಜಿ.ಎಂ, ಇನಾಯತ್‌ಉಲ್ಲಾ ಟಿ. ಆಶಿಷ ರೆಡ್ಡಿ, ಕುಲಸಚಿವೆ (ಪರೀಕ್ಷಾಂಗ) ಪ್ರೊ.ಅನಿತಾ ಎಚ್.ಎಸ್., ಹಣಕಾಸು ಅಧಿಕಾರಿ ಪ್ರಿಯಾಂಕ ಡಿ, ಇದ್ದರು. ಕುಲಸಚಿವೆ ಪ್ರೊ.ಗಾಯತ್ರಿ ದೇವರಾಜ ಸ್ವಾಗತಿಸಿದರು. ಡಾ. ಸತ್ಯನಾರಾಯಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.