ರಾಮೇಶ್ವರ (ನ್ಯಾಮತಿ): ಗ್ರಾಮದಲ್ಲಿ ಶುಕ್ರವಾರ ಒಂದೇ ದಿನ 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗ್ರಾಮದಲ್ಲಿ ಭಯದ ವಾತಾವಾರಣ ನಿರ್ಮಾಣವಾಗಿದೆ.
ಒಂದು ವಾರದಿಂದ ಗ್ರಾಮದ ಕೆಲವರಿಗೆ ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳು ಕಂಡುಬಂದಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆತಂಕದಿಂದ ಯಾರೂ ಕೊರೊನಾ ಪರೀಕ್ಷೆಗೆ ಒಳಗಾಗಿರಲಿಲ್ಲ.
ಗ್ರಾಮದಲ್ಲಿ 1,591 ಜನಸಂಖ್ಯೆ ಇದ್ದು,ಗ್ರಾಮದ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ರೋಗ ಲಕ್ಷಣಗಳು ಸಾಮೂಹಿಕವಾಗಿ ಕಂಡುಬಂದಿವೆ. ಗ್ರಾಮದಲ್ಲಿ ಕುಡಿಯುವ ನೀರನ್ನು ಗುಣಮಟ್ಟ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
‘ಗುರುವಾರ ಗ್ರಾಮದ ಹಿರಿಯರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದು, ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಮನವರಿಕೆ ಮಾಡಿ, ಗ್ರಾಮದಲ್ಲಿಯೇ ಕೊರೊನಾ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿಯೇ ಶುಕ್ರವಾರ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಕೆಂಚಪ್ಪ ಭಂತಿ ತಿಳಿಸಿದರು.
‘ಶುಕ್ರವಾರ 245 ಮಂದಿಯನ್ನು ವಿ.ಟಿ.ಎಂ (ವೈರಲ್ ಟ್ರಾನ್ಸ್ಪೋರ್ಟ್ ಮೀಡಿಯಾ) ಹಾಗೂ 51 ಜನರ ಆರ್.ಎ.ಟಿ ತಪಾಸಣೆ ನಡೆಸಿದ್ದು, ಅವರಲ್ಲಿ 29 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಅವರನ್ನು ಚಿಕಿತ್ಸೆಗಾಗಿ ಹೊನ್ನಾಳಿ ಆಸ್ಪತ್ರೆಗೆ ಕಳುಹಿಸಿಲಾಗಿದೆ’ ಎಂದರು.
ಗ್ರಾಮಕ್ಕೆ ಶಾಸಕ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ, ಕೊರೊನಾ ಸೋಂಕಿತರಿಗೆ ಧೈರ್ಯ ಹೇಳಿ ಹೊನ್ನಾಳಿಗೆ ಆಸ್ಪತ್ರೆಗೆ ಕಳುಹಿಸಿದರು.
ಬೆಳಗುತ್ತಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚನ್ನೇಶ, ಯುರಗನಾಳ್ ಗ್ರಾಮ ಪಂಚಾಯಿತಿ ಪಿಡಿಒ ಎ.ಕೆ. ಪ್ರದೀಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.