ದಾವಣಗೆರೆ: ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಹೋಗಿರುವ ಯಾವುದೇ ಮಾದರಿಗಳ ಫಲಿತಾಂಶ ಸೋಮವಾರ ಬಂದಿಲ್ಲ.
ಜಿಲ್ಲೆಯಿಂದ ಸೋಮವಾರ 210 ಸ್ವ್ಯಾಬ್ಗಳನ್ನು (ಗಂಟಲದ್ರವ) ವಿವಿಧ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದೂ ಸೇರಿ 1217 ಮಾದರಿಗಳ ಫಲಿತಾಂಶ ಬಂದಿಲ್ಲ. ಹಾಗಾಗಿ ಸೋಮವಾರ ರಾಜ್ಯದಲ್ಲಿ 187 ಕೋವಿಡ್ ಪ್ರಕರಣಗಳು ದಾಖಲಾಗಿದ್ದರೂ ಜಿಲ್ಲೆಯ ಒಂದೇ ಒಂದು ಪಾಸಿಟಿವ್ ಪ್ರಕರಣಗಳಿಲ್ಲ. ಹಾಗೆಯೇ ನೆಗೆಟಿವ್ ಪ್ರಕರಣಗಳೂ ಇಲ್ಲ.
ಜಿಲ್ಲೆಯಲ್ಲಿ ಒಟ್ಟು 156 ಪ್ರಕರಣಗಳಿದ್ದು, ರಾಜ್ಯದಲ್ಲಿ 10ನೇ ಸ್ಥಾನದಲ್ಲಿದೆ. 121 ಮಂದಿ ಬಿಡುಗಡೆಗೊಂಡಿದ್ದು, ಜಿಲ್ಲೆ ಮೂರನೇ ಸ್ಥಾನ ಹೊಂದಿದೆ. 31 ಸಕ್ರಿಯ ಪ್ರಕರಣಗಳಿದ್ದು, 16ನೇ ಸ್ಥಾನದಲ್ಲಿದೆ. ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಬಾಷಾನಗರದಲ್ಲಿ 28 ದಿನಗಳ ಅವಧಿಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆ ಕಂಟೈನ್ಮೆಂಟ್ ವಲಯದಲ್ಲಿ ಮೂವರಿಗೆ ಕೊರೊನಾ ಪತ್ತೆಯಾಗಿದ್ದು, ಮೂವರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಹಾಗಾಗಿ ಬಾಷಾನಗರದ ಸೀಲ್ಡೌನ್ ತೆರವುಗೊಳಿಸಲಾಗಿದೆ.
ಉಳಿದಂತೆ ಜಾಲಿನಗರ, ಇಮಾಂ ನಗರ, ಬೇತೂರು ರಸ್ತೆ, ಕೆಟಿಜೆ ನಗರ, ಎಸ್ಪಿಎಸ್ ನಗರ, ಶಿವನಗರ, ರೈತರ ಬೀದಿ, ಪೊಲೀಸ್ ಕ್ವಾಟ್ರರ್ಸ್, ಆನೆಕೊಂಡ, ಎಸ್ಜೆಎಂ ನಗರ, ವಿನಾಯಕ ನಗರ, ಕೆರೆಬಿಳಚಿ, ಶಿವಕುಮಾರಸ್ವಾಮಿ ಬಡಾವಣೆ, ಶೇಖರಪ್ಪ ನಗರ, ತರಳಬಾಳು ಬಡಾವಣೆ, ಬಸವರಾಜಪೇಟೆ ಈ 16 ಪ್ರದೇಶಗಳಲ್ಲಿ ಸೀಲ್ಡೌನ್ ಮುಂದುವರಿದಿದೆ. ಕೆಟಿಜೆ ನಗರ, ಬೇತೂರು ರಸ್ತೆಗಳು ಕೂಡ ಇನ್ನೆರಡು ದಿನಗಳಲ್ಲಿ ಸೀಲ್ಡೌನ್ನಿಂದ ಹೊರಬರಲಿವೆ.
ನ್ಯಾಯಾಲಯದಲ್ಲಿ ಚಟುವಟಿಕೆ ಆರಂಭ: ಲಾಕ್ಡೌನ್ ಆಗಿದ್ದರಿಂದ ಎರಡು ತಿಂಗಳಿಗೂ ಅಧಿಕ ಸಮಯ ಕಲಾಪಗಳಿಲ್ಲದೇ ನೀರವ ಮೌನವಾಗಿದ್ದ ನ್ಯಾಯಾಲಯಗಳಲ್ಲಿ ಸೋಮವಾರ ಮತ್ತೆ ಚಟುವಟಿಕೆ ಆರಂಭಗೊಂಡಿದೆ. ಕೋಟುಗಳಿಲ್ಲದೇ ವಕೀಲರು ನ್ಯಾಯಾಲಯಕ್ಕೆ ಹಾಜರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.