ADVERTISEMENT

ಸೌಲಭ್ಯಗಳಿದ್ದರೂ ದಾವಣಗೆರೆಗಿಲ್ಲ ಕೊರೊನಾ ಲಸಿಕಾ ಉಗ್ರಾಣ

ಪ್ರಾದೇಶಿಕ ಕೇಂದ್ರವಾಗಿ ಚಿತ್ರದುರ್ಗವನ್ನು ಆಯ್ಕೆ ಮಾಡಿದ ಸರ್ಕಾರ

ಬಾಲಕೃಷ್ಣ ಪಿ.ಎಚ್‌
Published 20 ನವೆಂಬರ್ 2020, 2:59 IST
Last Updated 20 ನವೆಂಬರ್ 2020, 2:59 IST
ಡಾ. ಜಿ.ಡಿ. ರಾಘವನ್
ಡಾ. ಜಿ.ಡಿ. ರಾಘವನ್   

ದಾವಣಗೆರೆ: 2021ರ ಆರಂಭದಲ್ಲಿ ಕೊರೊನಾ ಲಸಿಕೆ ಬರುವ ಸಾಧ್ಯತೆ ಇದೆ ಎಂಬ ಕಾರಣದಿಂದ ಪ್ರತಿ ನಾಲ್ಕೈದು ಜಿಲ್ಲೆಗಳಿಗೆ ಒಂದು ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಿ ಅಲ್ಲಿ ಲಸಿಕಾ ಸಂಗ್ರಹಣೆ ಮಾಡಲು ಸರ್ಕಾರ ನಿರ್ಧರಿಸಿದೆ. ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಚಿತ್ರದುರ್ಗ ಜಿಲ್ಲೆಗಳಿಗೆ ಎಲ್ಲ ಸೌಲಭ್ಯಗಳಿರುವ ದಾವಣಗೆರೆಯನ್ನು ಬಿಟ್ಟು ಚಿತ್ರದುರ್ಗವನ್ನು ಪ್ರಾದೇಶಿಕ ಕೇಂದ್ರವನ್ನಾಗಿ ಮಾಡಲಾಗಿದೆ.

ಎರಡು ಮೆಡಿಕಲ್‌ ಕಾಲೇಜುಗಳಿವೆ. ಸುಸಜ್ಜಿತ ಜಿಲ್ಲಾ ಆಸ್ಪತ್ರೆ ಇದೆ. ನಾಲ್ಕು ಜಿಲ್ಲೆಗಳಿಗೂ ದಾವಣಗೆರೆ ಮಧ್ಯದಲ್ಲಿದ್ದು, ಸಂಪರ್ಕ ಜಿಲ್ಲೆಯಾಗಿ ಇದೆ. ಹಾಗಾಗಿ ದಾವಣಗೆರೆಯಲ್ಲಿ ಲಸಿಕಾ ಉಗ್ರಾಣವನ್ನು ಮಾಡಿದ್ದರೆ ಸರಿಯಾಗುತ್ತಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ದಾವಣಗೆರೆಯಲ್ಲಿ ಖಾಸಗಿ, ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸುಮಾರು 25 ಸಾವಿರ ಮಂದಿ ಇದ್ದಾರೆ. ಅದೇ ಚಿತ್ರದುರ್ಗದಲ್ಲಿ ಸುಮಾರು 3,500 ಮಾತ್ರ ಇದ್ದಾರೆ. ಈ ಲೆಕ್ಕದಲ್ಲಿಯೂ ದಾವಣಗೆರೆ ಸರಿಯಾದ ಆಯ್ಕೆಯಾಗುತ್ತಿತ್ತು ಎಂಬುದು ಅವರು ಸಮರ್ಥನೆಯಾಗಿದೆ.

ADVERTISEMENT

ಆದರೆ ದಾವಣಗೆರೆ ಮತ್ತು ಚಿತ್ರದುರ್ಗದ ಡಿಎಚ್‌ಒ ಮತ್ತು ಡಿಎಸ್‌ಒಗಳು ಹೇಳುವ ಪ್ರಕಾರ ಎಲ್ಲ ಲಸಿಕೆಗಳೂ ಚಿತ್ರದುರ್ಗದಲ್ಲೇ ಸಂಗ್ರಹ ಮಾಡಿ ಉಳಿದ ಜಿಲ್ಲೆಗಳಿಗೆ ಮಾಡಲಾಗುತ್ತಿದೆ. ಹಾಗಾಗಿ ಕೊರೊನಾ ಲಸಿಕೆಯೂ ಸಹಜವಾಗಿ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬರಲಿದೆ.

‘ನಮ್ಮಲ್ಲಿ ಎಲ್ಲ ವ್ಯಾಕ್ಸಿನ್‌ಗಳ ಉಗ್ರಾಣ ಮೊದಲೇ ಇದೆ. ಪೊಲಿಯೊ, ಟಿಸಿಜಿ, ಎಂಆರ್‌, ಜೆಇ ಸಹಿತ ವಿವಿಧ ವ್ಯಾಕ್ಸಿನ್‌ಗಳು ನಾಲ್ಕು ಜಿಲ್ಲೆಗಳಿಗೆ ಇಲ್ಲಿಂದಲೇ ಪೂರೈಕೆ ಆಗುತ್ತಿತ್ತು. ಕೊರೊನಾ ಲಸಿಕೆ ಇಲ್ಲಿಗೆ ಬರುವ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ. ವ್ಯಾಕ್ಸಿನ್‌ಸಂರಕ್ಷಿಸಿ ಇಡುವ ದಾಸ್ತಾನು ವ್ಯವಸ್ಥೆ ನಮ್ಮಲ್ಲಿರುವುದು ಹೌದು’ ಎಂದು ಚಿತ್ರದುರ್ಗದ ಡಿಎಚ್‌ಒ ಡಾ.ಸಿ.ಎಲ್‌. ಫಾಲಾಕ್ಷ ತಿಳಿಸಿದ್ದಾರೆ.

‘ಜನವರಿಯಲ್ಲಿ ಲಸಿಕೆ ಬರಬಹುದು. ತಯಾರಾಗಿರಿ ಎಂದಷ್ಟೇ ಮಾಹಿತಿ ಬಂದಿದೆ. ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದೇವೆ. ಲಸಿಕೆಯನ್ನು ಇಲ್ಲೇ ಸಂಗ್ರಹಿಸುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ’ ಎಂದು ಚಿತ್ರದುರ್ಗ ಸರ್ವೇಕ್ಷಣಾಧಿಕಾರಿ ಅಧಿಕಾರಿ ಡಾ. ತುಳಸಿರಂಗನಾಥ್‌ ಮಾಹಿತಿ ನೀಡಿದರು.

‘ಚಿತ್ರದುರ್ಗವನ್ನು ಪ್ರಾದೇಶಿಕ ಕೇಂದ್ರವನ್ನಾಗಿ ಮಾಡಿರುವ ಬಗ್ಗೆ ಮೌಖಿಕವಾಗಿ ಮಾಹಿತಿ ಬಂದಿದೆ. ಪ್ರತಿ ನಾಲ್ಕೈದು ಜಿಲ್ಲೆಗಳಿಗೆ ಒಂದು ಜಿಲ್ಲೆಯನ್ನು ಪ್ರಾದೇಶಿಕ ಕೇಂದ್ರವನ್ನಾಗಿ ಮಾಡಲಾಗುತ್ತದೆ. ಚಿತ್ರದುರ್ಗವು ಈ ಭಾಗದಲ್ಲಿ ಎಲ್ಲ ಲಸಿಕೆಗಳಿಗೆ ಈವರೆಗೆ ಪ್ರಾದೇಶಿಕ ಕೇಂದ್ರವಾಗಿರುವುದರಿಂದ ಕೊರೊನಾ ಲಸಿಕೆ ಕೂಡ ಅಲ್ಲಿಗೇ ಬರುವುದರಲ್ಲಿ ಅಚ್ಚರಿ ಏನಿಲ್ಲ’ ಎಂದು ದಾವಣಗೆರೆ ಡಿಎಚ್‌ಒ ಡಾ. ನಾಗರಾಜ್‌ಮತ್ತು ದಾವಣಗೆರೆ ಸರ್ವೇಕ್ಷಣಾಧಿಖಾರಿ ಡಾ. ಜಿ.ಡಿ. ರಾಘವನ್‌‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.