ADVERTISEMENT

ಶಿವಗಂಗೋತ್ರಿಯಲ್ಲಿ ಜೂನ್ 4ರಂದು ಮತ ಎಣಿಕೆ

ಇವಿಎಂ ಭದ್ರತಾ ಕೊಠಡಿ, ಎಣಿಕೆ ಕೇಂದ್ರ ಸಿದ್ದತೆ ಪರಿಶೀಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 1 ಮೇ 2024, 6:22 IST
Last Updated 1 ಮೇ 2024, 6:22 IST
ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯಲ್ಲಿ ಭದ್ರತಾ ಕೊಠಡಿ ಹಾಗೂ ಮತ ಎಣಿಕೆಯ ಕೇಂದ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಪರಿಶೀಲಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯಲ್ಲಿ ಭದ್ರತಾ ಕೊಠಡಿ ಹಾಗೂ ಮತ ಎಣಿಕೆಯ ಕೇಂದ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಪರಿಶೀಲಿಸಿದರು.   

ದಾವಣಗೆರೆ: ಲೋಕಸಭಾ ಚುನಾವಣೆಯ ದಾವಣಗೆರೆ ಕ್ಷೇತ್ರದ ಮತ ಎಣಿಕೆಯು ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯಲ್ಲಿ ಜೂನ್ 4ಕ್ಕೆ ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯಲಿದ್ದು, ಇವಿಎಂ ಭದ್ರತಾ ಕೊಠಡಿ ಮತ್ತು ಎಣಿಕೆ ಕೇಂದ್ರದ ಸಿದ್ಧತೆಯನ್ನು ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಸೋಮವಾರ ಪರಿಶೀಲಿಸಿದರು.

ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹರಪನಹಳ್ಳಿ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಶಿವಗಂಗೋತ್ರಿಯಲ್ಲಿ ನಡೆಯಲಿದೆ. ಇಲ್ಲಿನ ಕಾಮರ್ಸ್ ಬ್ಲಾಕ್ ನೆಲಮಹಡಿಯಲ್ಲಿ 4 ಕ್ಷೇತ್ರ ಮತ್ತು ರಾಜ್ಯಶಾಸ್ತ್ರ ಬ್ಲಾಕ್‍ನ ಮೊದಲ ಮಹಡಿಯಲ್ಲಿ 4 ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ಮೇ 7ರಂದು ಮತದಾನ ನಡೆದ ಬಳಿಕ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಡಿಮಸ್ಟರಿಂಗ್ ಕೇಂದ್ರದಿಂದ ಭದ್ರತೆಯೊಂದಿಗೆ ಎಣಿಕೆ ಕೇಂದ್ರಕ್ಕೆ ತಂದು ಭದ್ರತಾ ಕೊಠಡಿಯಲ್ಲಿ ಕಾಯ್ದಿರಿಸಲಾಗುವುದು. ಮೇ 8ರಿಂದ ಎಣಿಕೆಯ ದಿನಾಂಕ ಜೂನ್‌ 4ರವರೆಗೆ ಅರೆ ಸೇನಾಪಡೆಯ ಭದ್ರತೆಯೊಂದಿಗೆ ಸಂಪೂರ್ಣ ಸರ್ಪಗಾವಲಿನ ಭದ್ರತಾ ವ್ಯವಸ್ಥೆ ಮಾಡಲಾಗುವುದು. ಇವಿಎಂ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸುವುದರಿಂದ ಎಣಿಕೆ ಸಿದ್ದತೆಯನ್ನು ಈಗಲೇ ಮಾಡಿಕೊಳ್ಳಬೇಕಾಗಿದ್ದು ಸಿದ್ದತೆಯನ್ನು ಪರಿಶೀಲಿಸಲಾಯಿತು.

ADVERTISEMENT

‘ಎಣಿಕೆ ಪೂರ್ವ ಇವಿಎಂ ಭದ್ರತೆಗೆ ಟುಟೈರ್ ಪದ್ದತಿ: ಮತದಾನ ನಂತರ ಇವಿಎಂ ಸಂಗ್ರಹಿಸಲಾದ ಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಜೊತೆಗೆ 100 ಮೀಟರ್ ವ್ಯಾಪ್ತಿಯೊಳಗೆ ಸಿಎಪಿಎಫ್ ಕೇಂದ್ರ ಸಶಸ್ತ್ರ ಪೊಲೀಸ್ ಫೋರ್ಸ್ ಭದ್ರತೆಯನ್ನು ನೀಡಲಾಗುತ್ತದೆ. ರಾಜ್ಯ ಸಶಸ್ತ್ರ ಮೀಸಲು ಪಡೆಯ ಭದ್ರತೆ ಒದಗಿಸಲಾಗಿರುತ್ತದೆ. ಚುನಾವಣಾಧಿಕಾರಿಗಳು ಪ್ರತಿದಿನ ಎರಡು ಭಾರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುವರು’ ಎಂದರು.

ಅಭ್ಯರ್ಥಿಗಳಿಗೂ ಅವಕಾಶ:

ಮೇ 7ರಂದು ನಡೆಯುವ ಮತದಾನ ನಂತರ 1,946 ಮತಗಟ್ಟೆಗಳಲ್ಲಿನ ಮತಪೆಟ್ಟಿಗೆಗಳನ್ನು ಎಣಿಕೆ ಕೇಂದ್ರದಲ್ಲಿನ ಭದ್ರತಾ ಕೊಠಡಿಗಳಲ್ಲಿ ಕ್ಷೇತ್ರವಾರು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಎಲ್ಲಾ ಭದ್ರತಾ ಕೊಠಡಿಗಳ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಿದ್ದು, ಎಲ್ಲಾ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಸೀಲ್ ಮಾಡಲಾಗುತ್ತದೆ. ಪ್ರತಿ ಭದ್ರತಾ ಕೊಠಡಿಗೂ ಕೇಂದ್ರ ಸಶಸ್ತ್ರ ಪೊಲೀಸ್ ಫೋರ್ಸ್ ಕಾವಲಿರುತ್ತದೆ. ಸಿಸಿಟಿವಿ ಕ್ಯಾಮೆರಾಗಳ ನಿಯಂತ್ರಣಕ್ಕಾಗಿ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಇಲ್ಲಿ ಎಲ್ಲಾ ಕಡೆಯ ಸಿಸಿಟಿವಿಗಳ ಪ್ರದರ್ಶನ ಇರಲಿದೆ. ಅಭ್ಯರ್ಥಿಗಳು ಕಂಟ್ರೋಲ್ ರೂಂಗೆ ಬಂದು ಪರಿಶೀಲಿಸಬಹುದು. ಆದರೆ ಆಗಮಿಸುವ ಬಗ್ಗೆ 24 ಗಂಟೆ ಮುಂಚಿತವಾಗಿ ಮಾಹಿತಿ ನೀಡಿ ಬರಬೇಕಾಗುತ್ತದೆ. ಅವರು ಅಲ್ಲಿಯೇ ಇದ್ದು ನೋಡಲು ಸಹ ಅವಕಾಶವಿದೆ.

ಪರಿಶೀಲನೆ ವೇಳೆ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.