ADVERTISEMENT

ಗಣೇಶ ಬಡಾವಣೆಗೆ ನಾಗರಿಕರ ಸ್ವಯಂ ದಿಗ್ಬಂಧನ

ಜಾಲಿ ಮುಳ್ಳು ಹಾಕಿ ರಸ್ತೆ ಬಂದ್‌ ಮಾಡಿದ ಸ್ಥಳೀಯರು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 9:38 IST
Last Updated 26 ಮಾರ್ಚ್ 2020, 9:38 IST
ದಾವಣಗೆರೆ ನಗರದ ಗಣೇಶ ಬಡಾವಣೆಯೊಳಗೆ ಹೊರಗಿನವರು ಪ್ರವೇಶಿಸುವುದನ್ನು ತಡೆಯಲು ಸ್ಥಳೀಯ ನಿವಾಸಿಗಳು ರಸ್ತೆಗೆ ಜಾಲಿ ಮುಳ್ಳುಗಳನ್ನಿಟ್ಟು ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ.
ದಾವಣಗೆರೆ ನಗರದ ಗಣೇಶ ಬಡಾವಣೆಯೊಳಗೆ ಹೊರಗಿನವರು ಪ್ರವೇಶಿಸುವುದನ್ನು ತಡೆಯಲು ಸ್ಥಳೀಯ ನಿವಾಸಿಗಳು ರಸ್ತೆಗೆ ಜಾಲಿ ಮುಳ್ಳುಗಳನ್ನಿಟ್ಟು ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ.   

ದಾವಣಗೆರೆ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸ್ಥಳೀಯ ನಿವಾಸಿಗಳು ನಗರದ ಗಣೇಶ ಬಡಾವಣೆ ಪ್ರವೇಶಿಸುವ ಒಳ ರಸ್ತೆಗಳ ಮೇಲೆ ಜಾಲಿ ಮುಳ್ಳುಗಳನ್ನು ಹಾಕುವ ಮೂಲಕ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಮನೆಯಲ್ಲೇ ಉಳಿಯುವಂತೆ ಕರೆ ನೀಡಿದ್ದಾರೆ. ಹೀಗಿದ್ದರೂ ಬಡಾವಣೆಯ ರಸ್ತೆಗಳಲ್ಲಿ ಅನಗತ್ಯವಾಗಿ ಹೊರಗಿನವರು ವಾಹನಗಳಲ್ಲಿ ಸುತ್ತಾಡುತ್ತಿದ್ದರು. ಹೀಗಾಗಿ ಬಡಾವಣೆಯ ನಿವಾಸಿಗಳೂ ಹೊರಗೆ ಹೋಗಬಾರದು ಹಾಗೂ ಹೊರಗಿನವರು ಯಾರೂ ಒಳಗೆ ಬರಬಾರದು ಎಂದು ನಾಗರಿಕ ಹಿತರಕ್ಷಣಾ ವೇದಿಕೆಯವರು ರಸ್ತೆಯನ್ನು ಬಂದ್‌ ಮಾಡಲು ನಿರ್ಧರಿಸಿದ್ದೇವೆ’ ಎಂದು ಸ್ಥಳೀಯ ನಿವಾಸಿ ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಕದಲ್ಲೇ ಬಸ್‌ನಿಲ್ದಾಣ ಇದೆ. ಕೊರೊನಾ ಸೋಂಕು ಯಾರಿಗೆ ತಗುಲಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಪೊಲೀಸರು ನಿರ್ಬಂಧ ಹೇರಿದ್ದರೂ ಜನ ತಿರುಗಾಡುವುದನ್ನು ನಿಲ್ಲಿಸಿಲ್ಲ. ಕೊರೊನಾ ಸೋಂಕಿನ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಬುಧವಾರ ರಾತ್ರಿ ಜಾಲಿ ಗಿಡಗಳನ್ನು ಕಡಿದು ಬಡಾವಣೆಯ ಒಳಗೆ ಪ್ರವೇಶಿಸುವ ನಾಲ್ಕು ರಸ್ತೆಗಳ ಮೇಲೆ ಹಾಕಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದೇವೆ’ ಎಂದು ಅರವಿಂದ ಹೇಳಿದರು.

ADVERTISEMENT

‘ಜನ ಓಡಾಡುವುದನ್ನು ನಿಲ್ಲಿಸದೇ ಇದ್ದರೆ ಈ ಸೋಂಕು ಹರಡುವುದನ್ನು ತಡೆಯುವುದು ಬಹಳ ಕಷ್ಟ. ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಇಟಲಿ ದೇಶಕ್ಕಾದ ಸ್ಥಿತಿಯೂ ನಮಗೆ ಬರಲಿದೆ. ಆಗ ದೇಶ ಮತ್ತಷ್ಟು ಹಿಂದುಳಿಯುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.