ADVERTISEMENT

ಕೋವಿಡ್ ಲಸಿಕೆ ವಿತರಣೆ ತಾಲೀಮು ಯಶಸ್ವಿ

ಮೊದಲ ಹಂತದ ಕೋವಿಡ್ ಲಸಿಕೆ ನೀಡಿಕೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧ: ಎಸ್.ಆರ್. ಉಮಾಶಂಕರ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 2:48 IST
Last Updated 9 ಜನವರಿ 2021, 2:48 IST
ದಾವಣಗೆರೆಯ ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ನಡೆದ ಕೋವಿಡ್ ಲಸಿಕೆ ವಿತರಣೆ ತಾಲೀಮು
ದಾವಣಗೆರೆಯ ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ನಡೆದ ಕೋವಿಡ್ ಲಸಿಕೆ ವಿತರಣೆ ತಾಲೀಮು   

ದಾವಣಗೆರೆ: ಜಿಲ್ಲೆಯ 6 ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ ಲಸಿಕೆ ವಿತರಣೆ ತಾಲೀಮು ಶುಕ್ರವಾರ ಯಶಸ್ವಿಯಾಗಿ ನಡೆಯಿತು.

ದಾವಣಗೆರೆಯ ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೈಜ ಲಸಿಕೆ ವಿತರಣೆ ಹೊರತುಪಡಿಸಿ, ಲಸಿಕೆ ವಿತರಣೆಯ ಉಳಿದೆಲ್ಲ ಪ್ರಕ್ರಿಯೆಗಳ ತಾಲೀಮು ಶುಕ್ರವಾರ ವ್ಯವಸ್ಥಿತವಾಗಿ ಜರುಗಿತು. ಈ ವೇಳೆ ದಾಖಲೆ ಪರಿಶೀಲನೆ, ಲಸಿಕಾ ಸಂಗ್ರಹ ವ್ಯವಸ್ಥೆ, ಸಂಗ್ರಹಾಗಾರದಿಂದ ಲಸಿಕೆ ಕೇಂದ್ರಕ್ಕೆ ಸಾಗಾಣಿಕೆ, ಲಸಿಕೆ ಪಡೆಯುವವರಿಗೆ ಅಣಕು ಲಸಿಕೆ ನೀಡಿಕೆ ಕಾರ್ಯ ನಡೆಯಿತು.

ಬಾಷಾ ನಗರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ದೀಪಾ ಎ. ಅವರಿಗೆ ಲಸಿಕೆಯ ತಾಲೀಮು ನಡೆಸಿ, ಅವರ ಮೊಬೈಲ್ ಸಂಖ್ಯೆ ದಾಖಲಿಸಿ ಬಳಿಕ ಒಟಿಪಿ ಕಳುಹಿಸಿ, ಅದರ ಆಧಾರದಲ್ಲಿ ಮಾಹಿತಿ ದಾಖಲಿಸಲಾಯಿತು. ಕೋವಿಡ್ ಲಸಿಕೆ ಮೊದಲ ಡೋಸ್ ವಿತರಣೆಯ ಅಣಕು ತಾಲೀಮು ನಡೆಸಲಾಯಿತು. ಬಳಿಕ 30 ನಿಮಿಷ ನಿಗಾವಣೆ ಕೊಠಡಿಯಲ್ಲಿ ನಿಗಾದಲ್ಲಿರಿಸಿ, ಲಸಿಕೆ ಪಡೆದ ಬಳಿಕ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಕರಪತ್ರ ನೀಡಲಾಯಿತು. 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ತಾಲೀಮೂ ನಡೆಯಿತು.

ADVERTISEMENT

ಆರೋಗ್ಯ ಅಧಿಕಾರಿಗಳು, ವೈದ್ಯರು, ಲಸಿಕೆ ನೀಡುವ ಸಿಬ್ಬಂದಿ, ಶುಶ್ರೂಷಕರು, ಸಹಾಯಕ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಲಸಿಕೆ ದಾಸ್ತಾನು, ಸುರಕ್ಷತೆ ಗಮನಿಸುವುದು, ಲಸಿಕೆ ಪಡೆಯಲು ಒಳ ಬರಲು ಮತ್ತು ಹೊರ ಹೋಗಲು ಪ್ರತ್ಯೇಕ ಬಾಗಿಲು, ನಿಗಾವಣೆ ಕೊಠಡಿ ವ್ಯವಸ್ಥೆಯ ಪರಿಶೀಲನೆನಡೆಸಲಾಯಿತು.

ಜಿಲ್ಲೆಯಲ್ಲಿ 17,500 ಜನರಿಗೆ ಲಸಿಕೆ ನೀಡಲು ಸಿದ್ಧತೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ 17,500 ಜನರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದುಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ಹೇಳಿದರು.

ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆ ಡ್ರೈರನ್ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿ, ‘ಲಸಿಕೆ ಪಡೆಯುವವರಎಲ್ಲಾ ಮಾಹಿತಿ ಸಿದ್ಧವಿದೆ. ಲಸಿಕೆ ಬಂದ ಕೂಡಲೇ ನೀಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಸಿದ್ಧತೆ ಬಗ್ಗೆ ತೃಪ್ತಿ ಇದೆ’ ಎಂದು ಹೇಳಿದರು.

‘ನಮ್ಮ ದೇಶದಲ್ಲಿ ಈ ಹಿಂದೆ ಪೋಲಿಯೊ, ಇಂದ್ರಧನುಷ್ ಸೇರಿ ಹಲವು ಲಸಿಕಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವ ಅನುಭವ ನಮ್ಮ ಆರೋಗ್ಯ ಇಲಾಖೆಗಿದೆ. ಹೀಗಾಗಿ ಕೋವಿಡ್ ಲಸಿಕೆ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ನಡೆಸುವ ವಿಶ್ವಾಸವಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮಾತನಾಡಿ, ‘ಲಸಿಕೆ ನೀಡಿಕೆಗೆ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ಕಾರ್ಯದರ್ಶಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. 6 ಕಡೆ ಲಸಿಕೆ ನೀಡಿಕೆ ತಾಲೀಮು ಮಾಡಿಕೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲು ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಲಸಿಕೆ ನೀಡಿಕೆ ಕಾರ್ಯವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲಾಗುವುದು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ, ಬಾಷಾನಗರದ ಯುಪಿಎಚ್‍ಸಿ ವೈದ್ಯಾಧಿಕಾರಿ ಡಾ. ಮಂಜುಳಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.