ದಾವಣಗೆರೆ: ಬೇರೆ ಬೇರೆ ಕಡೆಗಳಲ್ಲಿ ರೈತರ ಹಸು, ಅಡಿಕೆ ಕಳವು ಮಾಡುತ್ತಿದ್ದ ಆರೋಪದಲ್ಲಿ 6 ಮಂದಿಯನ್ನು ಮಲೇಬೆನ್ನೂರು ಕೋಮಾರನಹಳ್ಳಿ ಬಳಿ ಪೊಲೀಸರು ಬಂಧಿಸಿದ್ದಾರೆ. ₹ 6.44 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕು ಮಾಸೂರು ಗ್ರಾಮದ ರಾಜಾಸಾಬ್ (25), ಈರಾಪುರ ಗ್ರಾಮದ ಅಬ್ದುಲ್ (35), ಹರಿಹರ ತಾಲ್ಲೂಕು ಗಂಗನರಸಿ ಗ್ರಾಮದ ರಾಜ ಮೊಹಮ್ಮದ್ (36), ಗುತ್ತೂರು ಕಾಲೊನಿ ಯಲ್ಲಮ್ಮ ನಗರದ ಸಲೀಂ (37), ಗಂಗನರಸಿ ಗ್ರಾಮದ ರಫೀಕ್ (31) ಮತ್ತು ಶೌಕತ್ ಅಲಿ (22) ಬಂಧಿತ ಆರೋಪಿಗಳು.
ಹರಿಹರ ತಾಲ್ಲೂಕು ನಂದಿತಾವರೆ ಗ್ರಾಮದ ಬಿ.ಪಿ. ಬಸವನಗೌಡ ಅವರ ಮನೆಯಲ್ಲಿ ಅಡಿಕೆ ಕಳವಾಗಿರುವ ಬಗ್ಗೆ ಮೂರು ದಿನಗಳ ಹಿಂದೆ ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಮತ್ತು ಹರಿಹರ ಇನ್ಸ್ಪೆಕ್ಟರ್ ಶಿವಪ್ರಸಾದ್ ನೇತೃತ್ವದಲ್ಲಿ ತಂಡವೊಂದನ್ನು ಎಸ್ಪಿ ಹನುಮಂತರಾಯ ಮತ್ತು ಎಎಸ್ಪಿ ರಾಜೀವ್ ಎಂ. ರಚಿಸಿದ್ದರು.
ಈ ತಂಡವು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಂದಿತಾವರೆಯಲ್ಲಿ 95 ಕೆ.ಜಿ. ಅಡಿಕೆ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ದಾವಣಗೆರೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಹೊನ್ನೂರು ಗ್ರಾಮದಲ್ಲಿ 4.5 ಕ್ವಿಂಟಲ್ ಅಡಿಕೆ, ಹರಿಹರ ನಗರದಲ್ಲಿ ಹಸು, ಕರು ಕಳವು ಮಾಡಿ ಮಾರಾಟ ಮಾಡಿರುವ ಬಗ್ಗೆಯೂ ಬಾಯಿ ಬಿಟ್ಟಿದ್ದಾರೆ.
ಮಲೇಬೆನ್ನೂರು ಎಸ್ಐ ವೀರಬಸಪ್ಪ ಕುಸಲಾಪುರ್, ಸಿಬ್ಬಂದಿ ಯಾಸಿನ್ ಉಲ್ಲಾ, ಶಿವಕುಮಾರ್ ಕೆ. ಲಕ್ಷ್ಮಣ್.ಆರ್., ರಾಜಶೇಖರ್, ಬಸವರಾಜ ಟಿ., ಮೂರ್ತಿ, ಸಂತೋಷ್ ಕುಮಾರ್, ದ್ವಾರಕೀಶ್, ನಾಗಪ್ಪ ಕಡೆಮನಿ, ರವಿ, ವೆಂಕಟೇಶ್ ಕಾರ್ಯಾಚರಣೆ ತಂಡದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.