ದಾವಣಗೆರೆ: ಜಗಳೂರಿನ ತಾಲ್ಲೂಕು ಕಚೇರಿ ಸಮೀಪ ಚರಂಡಿ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗಿದ್ದ ಕಲ್ಲು ಬಂಡೆಯನ್ನು ತೆರವುಗೊಳಿಸಲು ನಡೆಸಿದ ಸ್ಫೋಟಕ್ಕೆ ಪಟ್ಟಣದ ಜನರು ಆತಂಕಗೊಂಡಿದ್ದಾರೆ. ಸ್ಫೋಟದಲ್ಲಿ ಸಿಡಿದ ಕಲ್ಲುಗಳು ಜನವಸತಿ ಪ್ರದೇಶದಲ್ಲಿ ಬಿದ್ದಿವೆ.
ಶನಿವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಥಳದಲ್ಲಿ ಸ್ಫೋಟಕಗಳ ಪತ್ತೆಗೆ ಹುಡುಕಾಟ ನಡೆಸಿದೆ. ಕಲ್ಲು ಬಂಡೆ ಸ್ಫೋಟಕ್ಕೆ ಜಿಲೆಟಿನ್ ಕಡ್ಡಿ ಬಳಕೆ ಮಾಡಿದ ಶಂಕೆ ವ್ಯಕ್ತವಾಗಿದೆ.
ಪಟ್ಟಣದ ಬಿಲಾಲ್ ಮಸೀದಿಯಿಂದ ವೈಭವ ಹೋಟೆಲ್ ವರಗೆ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಅಡ್ಡಿಯಾದ ಕಲ್ಲುಬಂಡೆ ತೆರವುಗೊಳಿಸಲು ಮುಂದಾಗಿದ್ದ ಗುತ್ತಿಗೆದಾರ, ಶನಿವಾರ ರಾತ್ರಿ 10.30ರ ಬಳಿಕ ಕಲ್ಲು ಬಂಡೆಯನ್ನು ಸ್ಫೋಟಿಸಿದ್ದಾರೆ. ಇದರಿಂದ ಹೊರಹೊಮ್ಮಿದ ಭಾರಿ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಕಲ್ಲಿನ ತುಂಡುಗಳು ಬಹುದೂರದವರೆಗೆ ಬಿದ್ದಿವೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.
ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಸ್ಪೋಟಗಳಿಗೆ ಪರಿಶೀಲನೆ ನಡೆಸಿವೆ. ಘಟನಾ ಸ್ಥಳವನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಣೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.