ADVERTISEMENT

ಕೊಳೆರೋಗ: ಈರುಳ್ಳಿ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 11:34 IST
Last Updated 9 ಸೆಪ್ಟೆಂಬರ್ 2021, 11:34 IST
ಸಂತೇಬೆನ್ನೂರು ಸಮೀಪದ ಭೀಮನೆರೆ ಗ್ರಾಮದಲ್ಲಿ ಕೊಳೆ ರೋಗ ಬಿದ್ದ ಈರುಳ್ಳಿ ಬೆಳೆ ನಾಶ ಪಡಿಸಿರುವುದು
ಸಂತೇಬೆನ್ನೂರು ಸಮೀಪದ ಭೀಮನೆರೆ ಗ್ರಾಮದಲ್ಲಿ ಕೊಳೆ ರೋಗ ಬಿದ್ದ ಈರುಳ್ಳಿ ಬೆಳೆ ನಾಶ ಪಡಿಸಿರುವುದು   

ಸಂತೇಬೆನ್ನೂರು:ಅಧಿಕ ಮಳೆಯಿಂದಾಗಿ ಕೊಳೆರೋಗದಿಂದ ಈರುಳ್ಳಿ ಬೆಳೆ ನಾಶವಾಗಿದೆ. ರೋಗ ನಿಯಂತ್ರಣಕ್ಕೆ ಬಾರದೆ ಬೇಸತ್ತ ಭೀಮನೆರೆ ರೈತರು ಈರುಳ್ಳಿ ಬೆಳೆಯನ್ನು ನಾಶ ಪಡಿಸಿದ್ದಾರೆ.

40 ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಈರುಳ್ಳಿಗೆ ಕೊಳೆರೋಗ ತಗುಲಿದ್ದು, ಒಂದು ತಿಂಗಳಿಂದ ರೋಗ ನಿಯಂತ್ರಣಕ್ಕೆ ರೈತರು ಹರಸಾಹಸಪಟ್ಟಿದ್ದು, ಕೊನೆಗೂ ಬೇಸತ್ತು ಈರುಳ್ಳಿ ಬೆಳೆನಾಶಪಡಿಸಿದರು.

‘ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. ಕೊಳೆ ರೋಗಕ್ಕೆ ಬೆಳೆ ನಲುಗಿತ್ತು. ನಿವಾರಣೆಗೆ ₹31 ಸಾವಿರ ಖರ್ಚು ಮಾಡಿ 6 ಸಲ ಔಷಧ ಸಿಂಪಡಿಸಿದೆ. ರೋಗ ಹತೋಟಿಗೆ ಬರಲಿಲ್ಲ. ಈರುಳ್ಳಿ ಗಡ್ಡೆಗಳು ಕೊಳೆಯಲು ಆರಂಭಿಸಿದವು. 2 ಎಕರೆಗೆ ₹ 1ಲಕ್ಷ ಖರ್ಚು ಮಾಡಿದ್ದೆ.ಈರುಳ್ಳಿ ಬೆಳೆ ನಾಶ ಮಾಡದೆ ವಿಧಿಯಿರಲಿಲ್ಲ. ಇದರಿಂದ ಅಪಾರ ನಷ್ಟ ಉಂಟಾಗಿದೆ’ ಎಂದು ಅಳಲು ತೋಡಿಕೊಂಡರು ರೈತ ಮಹೇಂದ್ರ.

ADVERTISEMENT

‘300ರಿಂದ 400 ಪಾಕೆಟ್ ಈರುಳ್ಳಿ ಇಳುವರಿ ಬರುವ ನಿರೀಕ್ಷೆ ಇತ್ತು. ₹ 20 ಸಾವಿರ ಖರ್ಚು ಮಾಡಿ ನಾಲ್ಕು ಬಾರಿ ಔಷಧ ಸಿಂಪಡಿಸಿದೆ. ಬೆಳೆ ಚೇತರಿಸಿಕೊಳ್ಳಲಿಲ್ಲ. ಗರಿ ಕೊಳೆತು ಉದುರಿತು. ಗಡ್ಡೆಗಳು ಕೊಳೆತ ಮೇಲೆ ಪ್ರಯೋಜನವಿಲ್ಲ. ಅದಕ್ಕಾಗಿ ನಾಶಪಡಿಸಿದೆ. 2 ಎಕರೆಗೆ ₹ 60 ಸಾವಿರ ಖರ್ಚು ಆಗಿದೆ’ ಎಂದು ರೈತ ರುದ್ರೇಶ್ ಬೇಸರಿಸಿದರು.

‘ಒಂದೆಡೆ ದುಬಾರಿ ಬೀಜದ ಖರೀದಿ. ಕೈಗೆಟುಕದ ಬೆಲೆ ದಾಟಿದ ಔಷಧ, ಗೊಬ್ಬರ, ನಿಯಂತ್ರಣಕ್ಕೆ ಬಾರದ ರೋಗ, ಹವಾಮಾನ ವೈಪರೀತ್ಯ, ಸದ್ಯ ಈರುಳ್ಳಿ ಬೆಲೆ ಕುಸಿತ ರೈತರ ಬದುಕನ್ನು ಅನಿಶ್ಚಿತಗೊಳಿಸಿವೆ’ ಎಂದು ರೈತ ಬಿ.ಎಚ್. ವೆಂಕಟೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.