ಸಾಸ್ವೆಹಳ್ಳಿ: ‘ಬೈರನಹಳ್ಳಿ ಸೇರಿ ಸಾಸ್ವೆಹಳ್ಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಎರಡು ಮೂರು ದಿನಗಳ ಕಾಲ ಮಳೆ ಬಿಡುವು ನೀಡಿದ್ದು, ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ’ ಎಂದು ಕೃಷಿ ಅಧಿಕಾರಿ ಶಶಿಧರ್ ಸಿ.ಯು. ತಿಳಿಸಿದ್ದಾರೆ.
ಸಾಸ್ವೆಹಳ್ಳಿ ಸಮೀಪದ ಬೈರನಹಳ್ಳಿ ಗ್ರಾಮದಲ್ಲಿ ರೈತರಿಗೆ ಬೀಜೋಪಚಾರದೊಂದಿಗೆ ಬಿತ್ತನೆ ಬಗ್ಗೆ ಅವರು ಮಾಹಿತಿ ನೀಡಿದರು.
‘ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಶೇ 60ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ರೈತರು ಅಕ್ಕಡಿ ಬೆಳೆಯಾಗಿ ತೊಗರಿ ಬಿತ್ತುವುದು ಸೂಕ್ತ. ರೈತರು ಈ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಇಳುವರಿ ಪಡೆಯಬಹುದು’ ಎಂದರು.
‘ಪೊಟ್ಯಾಷ್ ಯುಕ್ತ ಸಂಯುಕ್ತ ಗೊಬ್ಬರ ಬಳಕೆಯಿಂದ ಬೆಳೆಗಳ ಸಮತೋಲಿತ ಬೆಳವಣಿಗೆ ಸಾಧ್ಯವಾಗುತ್ತದೆ. ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ರೈತರು ಹೆಚ್ಚಿನ ಆದಾಯ ಗಳಿಸಬಹುದು’ ಎಂದು ರೈತರಿಗೆ ಸಲಹೆ ನೀಡಿದರು.
‘ಉಳಿದ ಶೇ 40ರಷ್ಟು ಭಾಗದಲ್ಲಿ ಬಿತ್ತನೆ ವಿಳಂಬವಾಗಿದ್ದು, ಇದಕ್ಕೆ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯೇ ಕಾರಣವಾಗಿದೆ. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ’ ಎಂದರು.
ಕೃಷಿ ಅಧಿಕಾರಿಗಳು ಬೀಜೋಪಚಾರದ ಮಹತ್ವವನ್ನು ರೈತರಿಗೆ ಮನವರಿಕೆ ಮಾಡಿದರು. ಬಿಜೋಪಾಚಾರದಿಂದ ಕೀಟಬಾಧೆಯನ್ನು ತಡೆಯಬಹುದು’ ಎಂದರು.
ಕೃಷಿ ತಾಂತ್ರಿಕ ಉತ್ತೇಜಕ ಕುಮಾರ್ ನಾಯ್ಕ, ರೈತರಾದ ಸೋಮ್ಲಬಾಯಿ, ವಸಂತ ನಾಯ್ಕ, ಶೇಖರ್ ನಾಯ್ಕ ಹಾಗೂ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.