ADVERTISEMENT

ದಾವಣಗೆರೆ: ಕಾಯಂಗೆ ಡಿ ಗ್ರೂಪ್ ನೌಕರರ ಆಗ್ರಹ

ಮೂವರು ಡಿ ಗ್ರೂಪ್ ನೌಕರರಿಗೆ ಕೋವಿಡ್–19: ಡಿ.ಹನುಮಂತಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 14:45 IST
Last Updated 12 ಜೂನ್ 2020, 14:45 IST
ಚಿಗಟೇರಿ ಆಸ್ಪತ್ರೆಯ ಮುಂದೆ ಡಿ ಗ್ರೂಪ್ ನೌಕರರು
ಚಿಗಟೇರಿ ಆಸ್ಪತ್ರೆಯ ಮುಂದೆ ಡಿ ಗ್ರೂಪ್ ನೌಕರರು   

ದಾವಣಗೆರೆ: ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಮತ್ತು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಚಿಗಟೇರಿ ಜಿಲ್ಲಾ ಆಸ್ಪತ್ರೆ ದಿನಗೂಲಿ ನೌಕರರ ಡಿ –ಗ್ರೂಪ್‌ ನೌಕರರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಸಂಘದ ಗೌರವಾಧ್ಯಕ್ಷ ಡಿ.ಹನುಮಂತಪ್ಪ ‘ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಮೂವರಿಗೆ ಕೋವಿಡ್–19 ಬಂದಿದ್ದು, 15 ಮಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ. ಆಸ್ಪತ್ರೆಯಲ್ಲಿ 250 ಮಂದಿ ಕೆಲಸ ಮಾಡುತ್ತಿದ್ದು ಅವರಿಗೆ ಸೇವಾ ಭದ್ರತೆ ಇಲ್ಲವಾಗಿದೆ’ ಎಂದು ಆರೋಪಿಸಿದರು.

‘ಸಾವಿರಾರು ಮಂದಿ ಆಸ್ಪತ್ರೆಗೆ ಬಂದು ದಾಖಲಾಗುತ್ತಾರೆ. ನಾವು ಅವರ ಸೇವೆ ಮಾಡುತ್ತಿದ್ದೇವೆ. ನಾವು ಕೆಲಸ ಮಾಡದಿದ್ದರೆ ಇಲ್ಲಿ ಯಾರು ಬಂದು ಯಾರು ಬಂದು ಮಾಡುತ್ತಾರೆ. ಸೇವೆ ಮಾಡಿದ್ದಕ್ಕೆ ತಾನೇ ರೋಗ ಬಂದಿರುವುದು. ನರ್ಸ್‌ಗಳಿಗೆ, ಪೊಲೀಸರಿಗೆ, ವೈದ್ಯರಿಗೂ ಬಂದಿದೆ. 20 ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಬಿಡಿ ಎಂದರೆ ಬಿಟ್ಟು ಹೋಗಬೇಕು. ಕೂಡಲೇ ಕಾಯಂಗೊಳಿಸಬೇಕು’ ಎಂದು ಹನುಮಂತಪ್ಪ ಆಗ್ರಹಿಸಿದರು.

ADVERTISEMENT

‘ಇಲ್ಲಿ ಕೆಲಸ ಮಾಡುವವರನ್ನು ಕೊರೊನಾ ವಾರಿಯರ್ಸ್‌ ಎನ್ನುತ್ತಾರೆ. ಆದರೆ ಯೋಧರಿಗೆ ಯಾವ ಸ್ಥಾನವಿದೆ ಎಂದು ನೀವೆ ನೋಡಬಹುದು. ಸುಮ್ಮನೆ ನಮ್ಮ ಮೇಲೆ ಹೂವು ಹಾಕುತ್ತಾರೆ. ಹೂವು ಹಾಕುವ ಬದಲು ಹೊಟ್ಟೆ ಹಾಕಲು ರೆಡಿ ಇಲ್ಲ. ನಿಜವಾಗಿ ಕೆಲಸ ಮಾಡುವವರು ನಾವು. ದಿನದ 24 ಗಂಟೆಯೂ ರೋಗಿಯ ಜೊತೆ ನಾವು ಇರುತ್ತೇವೆ. ಅವರ ಸ್ವಚ್ಛತೆ ಮಾಡುತ್ತೇವೆ’ ಎಂದರು.

‘ನಿಟುವಳ್ಳಿಯಲ್ಲಿ ಬಾಡಿಗೆ ಮನೆಯವರು ನಮ್ಮನ್ನು ಖಾಲಿ ಮಾಡಿಸುತ್ತಿದ್ದಾರೆ. ನಾವೇನು ಹೊರಗಡೆ ಹೋಗಿಲ್ಲ. ಆಸ್ಪತ್ರೆಯಲ್ಲಿದ್ದೇ ರೋಗ ತೆಗೆದುಕೊಂಡಿದ್ದಾರೆ. ಮನೆ ಖಾಲಿ ಮಾಡಿಸಿದರೆ ಜೀವನ ಹೇಗೆ ಮಾಡೋದು. ಕೆಲಸ ಮಾಡಿ ಮನೆಗೆ ಹೋದರೆ ಜನರು ನಮ್ಮನ್ನು ನೋಡಿ ದೂರ ಸರಿಯುತ್ತಾರೆ’ ಎಂದು ನೌಕರರಾದ ವಿನೋದಾಬಾಯಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.