ದಾವಣಗೆರೆಯಲ್ಲಿ ಭಾನುವಾರ ರಾತ್ರಿ ಸುರಿಯುತ್ತಿದ್ದ ಮಳೆಯಲ್ಲಿ ಸಾಗಿದ ವಾಹನಗಳು
ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆ: ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ, ದೀಪಾವಳಿಯ ಸಂದರ್ಭದಲ್ಲಿ ಮತ್ತೆ ಕಾಣಿಸಿಕೊಂಡಿತು. ಗುಡುಗು ಸಹಿತ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಸುರಿಯಿತು. ಇದರಿಂದ ಮೆಕ್ಕೆಜೋಳ ಕಟಾವು ಹಾಗೂ ಹಬ್ಬದ ಸಂಭ್ರಮಕ್ಕೆ ತೊಂದರೆ ಉಂಟಾಯಿತು.
ವಾಯುಭಾರ ಕುಸಿತದಿಂದ ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ನಿರೀಕ್ಷೆಯಂತೆ ಭಾನುವಾರ ಮಧ್ಯಾಹ್ನದಿಂದ ಆರಂಭವಾದ ಮಳೆ, ದಾವಣಗೆರೆಯಲ್ಲಿ ಸಂಜೆಯ ಹೊತ್ತಿಗೆ ಧರೆಗೆ ಇಳಿಯಿತು.
ಹೊನ್ನಾಳಿ, ಹರಿಹರ, ನ್ಯಾಮತಿ, ಚನ್ನಗಿರಿ, ದಾವಣಗೆರೆ ತಾಲ್ಲೂಕಿನ ವಿವಿಧೆಡೆ ಮಳೆ ರಭಸದಿಂದ ಸುರಿಯಿತು. ಕೆಲವೇ ನಿಮಿಷಗಳಲ್ಲಿ ಚರಂಡಿಗಳು ತುಂಬಿ ಹರಿದವು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು.
ಮುಂಗಾರು ಹಂಗಾಮಿನ ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ಮಳೆ ಬಿಡುವು ನೀಡಿದ್ದರಿಂದ ಕಟಾವಿಗೆ ರೈತರು ಸಿದ್ಧತೆ ಮಾಡಿಕೊಂಡಿದ್ದರು. ಮತ್ತೆ ಮಳೆ ಸುರಿದ್ದಿದರಿಂದ ರೈತರು ಚಿಂತೆಗೀಡಾಗಿದ್ದಾರೆ. ಆದರೆ, ಈ ಮಳೆಯಿಂದ ಹಿಂಗಾರು ಹಂಗಾಮು ಬಿತ್ತನೆಗೆ ಅನುಕೂಲವಾಗಿದೆ.
ಮಲೇಬೆನ್ನೂರು ಹಾಗೂ ಕಡರನಾಯ್ಕನಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಹೊತ್ತು ಬಿರು ಮಳೆ ಸುರಿಯಿತು. ಸಂಜೆ 5.30ಕ್ಕೆ ಆರಂಭವಾದ ಮಳೆ ರಾತ್ರಿಯವರೆಗೆ ಬಂದಿತು. ದೀಪಾವಳಿಯ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಹೂ ಬೆಳೆಗಾರರು ಆತಂಕಗೊಂಡಿದ್ದಾರೆ. ಪಟಾಕಿ ವ್ಯಾಪಾರಕ್ಕೂ ಇದರಿಂದ ತೊಂದರೆ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.