ದಾವಣಗೆರೆ: ಆಸೆಯೇ ಭ್ರಷ್ಟಾಚಾರಕ್ಕೆ ಮೂಲವಾಗಿದೆ. ಸಿಗುವ ವೇತನಕ್ಕಿಂತ ಅಧಿಕ ಮೌಲ್ಯದ ಸೊತ್ತುಗಳು ಮನೆಗೆ ಬರುತ್ತವೆ ಎಂದರೆ ಅಲ್ಲಿ ಭ್ರಷ್ಟಾಚಾರ ಇದೆ ಎಂಬುದೇ ಅರ್ಥ. ಹೆಣ್ಣುಮಕ್ಕಳು ಇದನ್ನು ಪ್ರಶ್ನಿಸಬೇಕು. ಎಲ್ಲಿಂದ ಬಂತು ಹಣ ಎಂದು ಕೇಳಬೇಕು. ಆಗ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಬಸವ ಬಳಗ, ನೀಲಾಂಬಿಕಾ ಅನುಭಾವ ಕೇಂದ್ರ ಮತ್ತು ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಆಶ್ರಯದಲ್ಲಿ ಸರಸ್ವತಿ ನಗರ ಬಸವ ಬಳಗ ಸಭಾಂಗಣದಲ್ಲಿ ಭಾನುವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.
ಆಸೆ ನಮ್ಮನ್ನು ಎಲ್ಲೆಲ್ಲೋ ಒಯ್ದು ಬಿಡುತ್ತದೆ. ಅದನ್ನೇ ಬುದ್ಧ ಎಚ್ಚರಿಸಿದ್ದು, ಬಸವಣ್ಣ ಹೇಳಿದ್ದು. ಈ ಎಚ್ಚರವೇ ಆದರ್ಶವಾಗಬೇಕು. ನಮ್ಮ ದುಡಿಮೆಯಲ್ಲೇ ಬದುಕು ಸಾಗಬೇಕು ಎಂದರು.
ವಿಜ್ಞಾನ, ತಂತ್ರಜ್ಞಾನ ನಡುವೆ ಧರ್ಮ, ಆಧ್ಯಾತ್ಮವನ್ನು ಉಳಿಸುವ ಸವಾಲು ಹೆಣ್ಣುಮಕ್ಕಳ ಮೇಲಿದೆ. ಪುರುಷರು ತಮ್ಮ ಜವಾಬ್ದಾರಿ ಮರೆತು ಬಿಡುವ ಅಪಾಯ ಇರುತ್ತದೆ. ಆದರೆ ಹೆಣ್ಣುಮಕ್ಕಳು ಜವಾಬ್ದಾರಿಯನ್ನು ಮರೆಯುವುದಿಲ್ಲ. ಹಾಗಾಗಿ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸುವ ಪ್ರಕ್ರಿಯೆಯಲ್ಲಿ ತಾಯಂದಿರ ಪಾತ್ರ ಹಿರಿದು ಎಂದು ತಿಳಿಸಿದರು.
ಸಿದ್ಧರಾಮೇಶ್ವರರು ಶೈವ ಪರಂಪರೆಯ ನಾಥ ಪಂಥದಲ್ಲಿ ಬಂದವರು. ಅವರನ್ನು ಪ್ರಭುದೇವರು ಅನುಭಾವ ಮಂಟಪಕ್ಕೆ ಕರೆದುಕೊಂಡು ಹೋಗಿದ್ದರು. ಚನ್ನಬಸವಣ್ಣ ಇಷ್ಟಲಿಂಗ ನೀಡಿದ್ದರು. ಕೆರೆಕಟ್ಟೆಗಳನ್ನು ಕಟ್ಟುವುದರ ಜತೆಗೆ ಅನುಭಾವದ ಬದುಕು ಕಟ್ಟಿದರು ಎಂದು ಹೇಳಿದರು.
ಇಸ್ಲಾಂ, ಕ್ರಿಶ್ಚಿಯನ್, ವೈದಿಕ ಧರ್ಮಗಳಲ್ಲಿ ಹೀಗೇ ಇರಬೇಕು ಎಂಬ ಕಟ್ಟಳೆಗಳಿರುತ್ತವೆ. ಅವುಗಳನ್ನು ಪ್ರಶ್ನಿಸುವ ಹಾಗಿರುವುದಿಲ್ಲ. ಆದರೆ ಲಿಂಗಾಯತದಲ್ಲಿ ಎಲ್ಲವನ್ನೂ ಪ್ರಶ್ನಿಸಬಹುದು. ಅದಕ್ಕಾಗಿ ವಚನಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ವಿ ಸಿದ್ಧರಾಮ ಶರಣರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ದೀಪಕ್ ಆರಾಧ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.