ಮಲೇಬೆನ್ನೂರು: ಸಮೀಪದ ದೇವರಬೆಳೆಕೆರೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಹರಿದು ಬರುತ್ತಿರುವ ಕಾರಣ ಜಲಾಶಯದ ಹಿನ್ನೀರಿನ ಭತ್ತದಗದ್ದೆ, ತೋಟ, ರಸ್ತೆ ನೀರಿನಲ್ಲಿ ಮುಳುಗಿರುವುದು ಶನಿವಾರ ಕಂಡುಬಂದಿತು.
ಕತ್ತಲಗೆರೆ, ಶ್ಯಾಗಲಿಹಳ್ಳ, ಸೂಳೆಕೆರೆ, ಭದ್ರಾ ನಾಲೆ ಮೂಲಕ ಹೆಚ್ಚು ನೀರು ಹರಿದು ಬರುತ್ತಿರುವ ಕಾರಣ ಜಲಾಶಯ ಭರ್ತಿಯಾಗಿದೆ. ವಿದ್ಯುತ್ ಉತ್ಪಾದನೆಗಾಗಿ ಪಿಕಪ್ ಜಲಾಶಯಕ್ಕೆ ಹೊಸದಾಗಿ ಅಳವಡಿಸಿರುವ ಲೋಹದ ಬಾಗಿಲುಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ನೀರಿನ ಹರಿವಿಗೆ ಅಡ್ಡಿಯಾಗಿದೆ ಎಂದು ರೈತರು ಕಿಡಿಕಾರಿದರು.
ಸಮೀಪದ ಗುಳದಹಳ್ಳಿ- ಸಂಕ್ಲೀಪುರ- ಮುಕ್ತೇನಹಳ್ಳಿ ರಸ್ತೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೀರಿನ 6ನೇ ಗುರುತು ದಾಟಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಲವೆಡೆ ಮೂಡಿದ್ದ ಬಿರುಕುಗಳನ್ನು ಮುಚ್ಚಲಾಗಿದೆ. ಸ್ವಯಂ ಚಾಲಿತ ಬಾಗಿಲು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಅಣೆಕಟ್ಟಿನಲ್ಲಿ ಹೆಚ್ಚು ನೀರು ಸಂಗ್ರಹವಾದರೆ ಅಪಾಯ ನಿಶ್ಚಿತ ಎಂದು ಸಿವಿಲ್ ಎಂಜಿನಿಯರ್ ಸನಾವುಲ್ಲಾ ಖಾಜಿ ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್ಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಅಣೆಕಟ್ಟೆಗೆ ಸಂಭವಿಸಬಹುದಾದ ಹಾನಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ನಂದಿತಾವರೆ ಪೂಜಾರ್ ಗದ್ದಿಗೆಪ್ಪ, ಶಂಭಣ್ಣ, ಕುಣಿ ಬೆಳೆಕೆರೆ ಹನುಮಂತಪ್ಪ, ರೈತ ಸಂಘದ ಹೊಳೆಸಿರಿಗೆರೆ ಫಾಲಾಕ್ಷ, ಕೋಗಳಿ ಮಂಜುನಾಥ್, ರೈತ ಸಂಘದ ಜಿಲ್ಲಾ ಅಧ್ಯಕ್ಷ ಜಿ. ಪ್ರಭುಗೌಡ ಆಗ್ರಹಿಸಿದರು.
‘ಜಲಾಶಯದಲ್ಲಿ ಕಸಕಡ್ಡಿ ತುಂಬಿಕೊಂಡು ನೀರಿನ ಹರಿವಿಗೆ ಸಮಸ್ಯೆಯಾಗಿವೆ. ಸಿಇ, ಎಸ್ಇ ಅವರ ಗಮನಕ್ಕೆ ತಂದಿದ್ದೇನೆ. ಹಿರಿಯ ಆಧಿಕಾರಿಗಳ ಮಾರ್ಗದರ್ಶನ ಪಡೆದು ತೆರವು ಮಾಡಲಾಗುವುದು’ ಎಂದು ಇಇ ಚಿದಂಬರ ಲಾಲ್ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.