ಮುಸಿಯಾ ದಾಳಿಗೊಳಗಾದ ಮಹಿಳೆ
ಹೊನ್ನಾಳಿ: ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಸೋಮವಾರ ನಾಯಿ ಹಾಗೂ ಮುಸಿಯಾ ಒಂದೇ ದಿನ ದಾಳಿ ನಡೆಸಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಶಂಕಿತ ಹುಚ್ಚು ನಾಯಿಯೊಂದು ಮೂರ್ನಾಲ್ಕು ಮಕ್ಕಳ ಮೇಲೆ ದಾಳಿ ನಡೆಸಿತು. ಶಾಲೆ ಹಾಗೂ ಮನೆಪಾಠಕ್ಕೆ ಹೋಗಿ ಮರಳುತ್ತಿದ್ದ ಕೆಲವು ವಿದ್ಯಾರ್ಥಿಗಳನ್ನು ನಾಯಿ ಕಚ್ಚಿ ಗಾಯಗೊಳಿಸಿದೆ.
ಕುಂದೂರು ಗ್ರಾಮದಲ್ಲಿ ಬಿಇಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಆಯೇಷ ಫಾತಿಮಾ ಎಂಬ ವಿದ್ಯಾರ್ಥಿನಿ ಮದರಸಾದಿಂದ ಮನೆಗೆ ಹಿಂತಿರುಗುವಾಗ ದಾಳಿ ಮಾಡಿದ ನಾಯಿ, ಆಕೆಯ ಮುಖ ಹಾಗೂ ಕೈ ಕಾಲುಗಳಿಗೆ ಕಚ್ಚಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ದಾವಣಗೆರೆಯ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಯಿತು.
ಇನ್ನಿಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೂ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ಗ್ರಾಮದ ಮಾ.ಬ. ನಾಗರಾಜ್ ತಿಳಿಸಿದ್ದಾರೆ.
ಮುಸಿಯಾ ದಾಳಿ: ಗ್ರಾಮದಲ್ಲಿ ಇದೇ ದಿನ ಮುಸಿಯಾ ಕೂಡಾ ದಾಳಿ ನಡೆಸಿದ್ದು, ಒಬ್ಬ ಬಾಲಕ ಹಾಗೂ ಮಹಿಳೆಯನ್ನು ಗಾಯಗೊಳಿಸಿದೆ.
ಮಹಿಳೆಯೊಬ್ಬರು ತಮ್ಮ ಮನೆಯ ಆವರಣದಲ್ಲಿ ಅಕ್ಕಿ ಹಸನು ಮಾಡುತ್ತಿದ್ದಾಗ ಮುಸಿಯಾ ಎರಗಿದೆ. ಬೇಕರಿಯಲ್ಲಿ ತಿಂಡಿ ತೆಗೆದುಕೊಂಡು ಮನೆಗೆ ಬರುತ್ತಿದ್ದ ಬಾಲಕನ ಮೇಲೆ ಅದೇ ಮುಸಿಯಾ ದಾಳಿ ನಡೆಸಿದೆ. ಈ ಇಬ್ಬರು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಕ್ರಮ ಕೈಗೊಳ್ಳಬೇಕು. ಮುಸಿಯಾ ಹಾಗೂ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಗ್ರಾ.ಪಂ. ಆಡಳಿತಕ್ಕೆ ಜನರು ಒತ್ತಾಯಿಸಿದರು.
ಮುಂಜಾಗ್ರತಾ ಕ್ರಮವಾಗಿ ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ತಮಿಳುನಾಡಿನಿಂದ ನಾಯಿ ಹಾಗೂ ಮುಸಿಯಾಗಳನ್ನು ಹಿಡಿಯುವ ತಜ್ಞರನ್ನು ಕರೆಸಲು ನಿರ್ಧರಿಸಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.