ADVERTISEMENT

ಕುಂದವಾಡ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

₹ 15 ಕೋಟಿ ವೆಚ್ಚದ ಯೋಜನೆ, ₹ 4.90 ಕಿ.ಮೀ. ಉದ್ದದ ಕೆರೆ ಏರಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 3:05 IST
Last Updated 3 ಜನವರಿ 2021, 3:05 IST
ಕುಂದವಾಡ ಕೆರೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಶನಿವಾರ ಚಾಲನೆ ನೀಡಿದರು
ಕುಂದವಾಡ ಕೆರೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಶನಿವಾರ ಚಾಲನೆ ನೀಡಿದರು   

ದಾವಣಗೆರೆ: ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಬಳಸಲಾಗುವ ಇಲ್ಲಿನ ಕುಂದವಾಡ ಕೆರೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ₹ 15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಶನಿವಾರ ಕುಂದವಾಡ ಕೆರೆ ಬಳಿ ಚಾಲನೆ ನೀಡಿದರು.

ಕುಂದವಾಡ ಕೆರೆಯು ದಾವಣಗೆರೆ ನಗರದ ಕುಡಿಯುವ ನೀರಿನ ಪ್ರಮುಖ ಸಂಗ್ರಹಗಾರ. ಇತ್ತೀಚಿನ ದಿನಗಳಲ್ಲಿ ಕುಂದವಾಡ ಕೆರೆಯ ಏರಿಯ ಮೇಲೆ ಮತ್ತು ಕೆರೆಯಲ್ಲಿ ಕಳೆ ಬೆಳೆದಿದೆ. ಹೂಳು ತುಂಬಿದೆ. ಇದರಿಂದಾಗಿ ಬೇಸಿಗೆಯಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಕೆರೆಯ ಮುಖ್ಯ ಏರಿಯಲ್ಲಿ ನೀರು ಸೋರಿಕೆಯಾಗುತ್ತಿತ್ತು. ಈ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಕೆರೆಯ ಒಟ್ಟು₹ 4.90 ಕಿ.ಮೀ. ಉದ್ದದ ಏರಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾಹಿತಿ ನೀಡಿದರು.

ಕೆರೆ ಏರಿ ಆವರಣದಲ್ಲಿ ಬೆಳೆದಿರುವ ಪೊದೆ, ಮುಳ್ಳನ್ನು ತೆರವುಗೊಳಿಸಿ, ಕೆರೆ ಏರಿಯನ್ನು ಎತ್ತರಿಸಲಾಗುವುದು ಅಲ್ಲದೆ ವಿಸ್ತರಿಸಲಾಗುವುದು. ಕೆರೆಯ ಒಳಮುಖದ ಇಳಿಜಾರಿನ ರಕ್ಷಣಾ ಕಾರ್ಯ ಕೈಗೊಳ್ಳಲಾಗುವುದು. ಪಾದಚಾರಿಗಳ ವಾಕಿಂಗ್ ಪಥ ರಚಿಸಿ, ಸುಧಾರಿಸಲಾಗುವುದು. ಆರ್ಕಿಟೆಕ್ಚರಲ್ ಫೆನ್ಸಿಂಗ್ ಮಾಡಲಾಗುವುದು. ಕಲ್ಲಿನ ಆಸನಗಳು ಮತ್ತು ಇತರೆ ಅಲಂಕಾರಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸ್ಥಿರವಾದ ಪಾಲಿಥಿಲಿನ್ ಡಸ್ಟ್‌ಬಿನ್‌ಗಳ ಅಳವಡಿಕೆ, ವಿದ್ಯುತ್ ಕಂಬ ಹಾಗೂ ದೀಪಗಳನ್ನು ಅಳವಡಿಸುವಂತಹ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷದ ಕಾಲಮಿತಿ ನಿಗದಿಪಡಿಸಲಾಗಿದೆ ಎಂದರು.

ADVERTISEMENT

ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮಾತನಾಡಿ, ‘ಕುಂದವಾಡ ಕೆರೆ ಏರಿಗೆ ಬೆಳಿಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ಸಾಕಷ್ಟು ಜನ ವಾಯುವಿಹಾರಕ್ಕೆ ಬರುತ್ತಾರೆ. ಇಲ್ಲಿನ ವಾತಾವರಣ ಆಹ್ಲಾದಕರವಾಗಿರಬೇಕು. ಅದಕ್ಕಾಗಿ ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಶಾಸಕ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.