ಹರಿಹರ: ಹುಬ್ಬಳ್ಳಿ ಈದ್ಗಾ ಮೈದಾನದ ಪ್ರಕರಣವನ್ನು ಸುಲಲಿತವಾಗಿ ಬಗೆಹರಿಸಿದ ಕೀರ್ತಿ ಜೆಡಿಎಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಬಿಜೆಪಿಯವರು ಜಿದ್ದಿಗೆ ಬಿದ್ದಿದ್ದರು. ಇನ್ನೊಂದು ಪಕ್ಷದವರು ಒಂದು ಧರ್ಮದವರ ಬೆಂಬಲಕ್ಕೆ ನಿಂತವರಂತೆ ಮಾಡಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುತ್ತಿದ್ದರು. ಆದರೆ, ವಾಸ್ತವವಾಗಿ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ಪ್ರಕರಣವನ್ನು ಅತ್ಯಂತ ಸರಳವಾಗಿ ಪರಿಹರಿಸಲಾಯಿತು. ಈವರೆಗೂ ಅಲ್ಲಿ ಮತ್ತೆ ಅಂತಹ ಸಮಸ್ಯೆ ಎದುರಾಗಿಲ್ಲ ಎಂದು ಹೇಳಿದರು.
‘ಇಂತಹ ಹತ್ತಾರು ವಿಷಯಗಳು ಇಂದು ರಾಜ್ಯದ ಜನಸಾಮಾನ್ಯರ ನಿದ್ದೆಗೆಡಿಸಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಪ್ರಕರಣಗಳನ್ನು ಜೀವಂತವಾಗಿಟ್ಟುಕೊಂಡು ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಕೋಮು ಭಾವನೆ ಕೆರಳಿಸುವ ಕೆಲಸವನ್ನು ಜೆಡಿಎಸ್ ಎಂದಿಗೂ ಮಾಡಿಲ್ಲ. ಕೋಮು ಸಾಮರಸ್ಯ, ಅಭಿವೃದ್ಧಿ, ಶಾಂತಿ, ನೆಮ್ಮದಿ ನಮ್ಮ ಪಕ್ಷದ ಧ್ಯೇಯ’ ಎಂದರು.
‘ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಎಚ್.ಡಿ ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಯವರು ‘ಜನತಾ ಜಲಧಾರ’ ಎಂಬ ರಥಕ್ಕೆ ರಾಜ್ಯದ ಹದಿನೈದು ಜಿಲ್ಲಾ ಕೇಂದ್ರಗಳಿಂದ ಚಾಲನೆ ನೀಡಿದ್ದಾರೆ. ಹೊಸಪೇಟೆ ತುಂಗಭದ್ರಾ ಡ್ಯಾಂನಿಂದ ನಮ್ಮ ಭಾಗದಲ್ಲಿ ರಥವು ಆರಂಭವಾಗಿದೆ. ಇದಕ್ಕೆ ರಾಜ್ಯದಲ್ಲಿ ಅಭೂತಪೂರ್ವ ಸ್ಪಂದನ ಸಿಗುತ್ತಿದೆ. ಈ ರಥವು ಏಪ್ರಿಲ್ 25 ಅಥವಾ 26ರಂದು ಹರಿಹರಕ್ಕೆ ಆಗಮಿಸಲಿದೆ’ ಎಂದು ಮಾಹಿತಿ ನೀಡಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶೀಲಾ ಕುಮಾರಿ, ನಗರಸಭೆ ಉಪಾಧ್ಯಕ್ಷ ಎ. ವಾಮನಮೂರ್ತಿ, ಸದಸ್ಯರಾದ ಆರ್.ಸಿ. ಜಾವೀದ್, ಬಿ. ಅಲ್ತಾಫ್, ದಿನೇಶ್ಬಾಬು, ವಿರೂಪಾಕ್ಷ, ಮನ್ಸೂರ್ ಮದ್ದಿ, ಮುಖಂಡರಾದ ಜಾಕಿರ್, ನಂದಿಗಾವಿ ಅಕ್ಕೇರಿ ರಾಜಣ್ಣ, ಕರಲಹಳ್ಳಿ ರೆಹಮಾನ್ ಸಾಬ್, ಎ.ಕೆ. ನಾಗಪ್ಪ, ಪರಮೇಶ್ ಗೌಡ್ರು, ಕೊಟ್ರೇಶ್ ಗೌಡ್ರು, ಶೇಖರಪ್ಪ, ಚಂದ್ರಪ್ಪ, ಕೆ.ಜಿ. ರಾಜಣ್ಣ, ಮುರುಗೇಶಪ್ಪ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.