ADVERTISEMENT

ದಾವಣಗೆರೆ | ನಕಲಿ ಚಿನ್ನದ ನಾಣ್ಯ ನೀಡಿ ₹ 8 ಲಕ್ಷ ವಂಚನೆ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:42 IST
Last Updated 2 ಆಗಸ್ಟ್ 2025, 7:42 IST
ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ವಂಚಿಸಿದ್ದ ಆರೋಪಿಗಳಿಂದ ವಶಕ್ಕೆ ಪಡೆದ ಹಣದೊಂದಿಗೆ ಜಗಳೂರು ಠಾಣೆಯ ಪೊಲೀಸರು
ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ವಂಚಿಸಿದ್ದ ಆರೋಪಿಗಳಿಂದ ವಶಕ್ಕೆ ಪಡೆದ ಹಣದೊಂದಿಗೆ ಜಗಳೂರು ಠಾಣೆಯ ಪೊಲೀಸರು   

ದಾವಣಗೆರೆ: ಅರ್ಧ ಕೆ.ಜಿ. ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ₹ 8 ಲಕ್ಷ ದೋಚಿ ಪರಾರಿಯಾಗಿದ್ದ ಆರೋಪಿಗಳಲ್ಲಿ ಇಬ್ಬರನ್ನು ಜಗಳೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹ 7.5 ಲಕ್ಷ ನಗದು ಹಾಗೂ 2 ಗ್ರಾಂ ಅಸಲಿ ಮತ್ತು 505 ಗ್ರಾಂ ನಕಲಿ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಬಟನಳ್ಳಿ ಗ್ರಾಮದ ಪ್ರಕಾಶ್ (29) ಹಾಗೂ ಮಾರಪ್ಪ (58) ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಸುರೇಶ್‌ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ತೆಲಂಗಾಣದ ನಾಲಗೊಂಡಾ ಜಿಲ್ಲೆಯ ಚಳಕುರ್ತಿ ತಾಂಡಾದ ರಮಾವತ್ ಭಾಸ್ಕರ್ ವಂಚನೆಗೆ ಒಳಗಾದವರು.

ವಿಜಯನಗರ ಜಿಲ್ಲೆಯ ಹಂಪಿಯ ಸುರೇಶ್‌ ಲಾರಿ ಚಾಲಕನಾಗಿದ್ದು, 2021ರಲ್ಲಿ ಚಳಕುರ್ತಿ ತಾಂಡಾಗೆ ಭೇಟಿ ನೀಡಿದ್ದನು. ಈ ವೇಳೆ ರಮಾವತ್‌ ಭಾಸ್ಕರ್‌ ಪರಿಚಿತರಾಗಿದ್ದು, ಪರಸ್ಪರ ಮೊಬೈಲ್‌ ಸಂಖ್ಯೆ ಬದಲಿಸಿಕೊಂಡಿದ್ದರು. ಏ.9ರಂದು ರಮಾವತ್ ಅವರಿಗೆ ದೂರವಾಣಿ ಕರೆ ಮಾಡಿದ ಸುರೇಶ್‌, ಚಿನ್ನದ ನಾಣ್ಯ ಸಿಕ್ಕಿರುವ ವಿಚಾರ ಹಂಚಿಕೊಂಡಿದ್ದನು.

ADVERTISEMENT

ಇದನ್ನು ನಂಬಿದ ರಮಾವತ್‌ ₹ 8 ಲಕ್ಷದೊಂದಿಗೆ ಅರ್ಧ ಕೆ.ಜಿ. ಚಿನ್ನದ ನಾಣ್ಯ ಖರೀದಿಸಲು ಬಳ್ಳಾರಿಗೆ ಬಂದಿದ್ದರು. ಜಗಳೂರು ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ಬಳಿಗೆ ಬರಲು ಸೂಚಿಸಿದ್ದ ಆರೋಪಿಗಳು ಚಿನ್ನದ ನಾಣ್ಯಗಳನ್ನು ನೀಡಿ ₹ 8 ಲಕ್ಷ ಹಣ ಪಡೆದು ಪರಾರಿಯಾಗಿದ್ದರು. ಈ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಿದ್ರಾಮಯ್ಯ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.