ADVERTISEMENT

ಪಿಂಚಣಿ ಸಮಸ್ಯೆ ಬಗೆಹರಿಯುವವರೆಗೂ ಹೋರಾಟ: ಅಶೋಕ್ ರಾವುತ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:10 IST
Last Updated 27 ನವೆಂಬರ್ 2022, 2:10 IST
ದಾವಣಗೆರೆಯಲ್ಲಿ ಇಪಿಎಸ್‌ 95 ರಾಷ್ಟ್ರೀಯ ಸಂಘರ್ಷ ಸಮಿತಿ ವತಿಯಿಂದ ಶನಿವಾರ ನಡೆದ ರಾಜ್ಯಮಟ್ಟದ ಇಪಿಎಸ್ 95 ಪಿಂಚಣಿದಾರರ ಸಮಾವೇಶದಲ್ಲಿ ಎನ್‌ಎಸಿ ರಾಷ್ಟ್ರೀಯ ಅಧ್ಯಕ್ಷ ಅಶೋಕ್ ರಾವುತ್ ಮಾತನಾಡಿದರು.
ದಾವಣಗೆರೆಯಲ್ಲಿ ಇಪಿಎಸ್‌ 95 ರಾಷ್ಟ್ರೀಯ ಸಂಘರ್ಷ ಸಮಿತಿ ವತಿಯಿಂದ ಶನಿವಾರ ನಡೆದ ರಾಜ್ಯಮಟ್ಟದ ಇಪಿಎಸ್ 95 ಪಿಂಚಣಿದಾರರ ಸಮಾವೇಶದಲ್ಲಿ ಎನ್‌ಎಸಿ ರಾಷ್ಟ್ರೀಯ ಅಧ್ಯಕ್ಷ ಅಶೋಕ್ ರಾವುತ್ ಮಾತನಾಡಿದರು.   

ದಾವಣಗೆರೆ: ‘ಇಪಿಎಸ್‌ 95 ಪಿಂಚಣಿದಾರರ ಸಮಸ್ಯೆಯನ್ನು ಬಗೆಹರಿಸಲು ರಾಷ್ಟ್ರೀಯ ಸಂಘರ್ಷ ಸಮಿತಿ ಹೋರಾಟಕ್ಕೆ ಸದಾ ಸಿದ್ಧವಿದೆ, ಸಮಸ್ಯೆ ಬಗೆಹರಿಯುವ ತನಕ ಹೋರಾಟ ನಿಲ್ಲುವುದಿಲ್ಲ’ ಎಂದು ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಹೇಳಿದರು.

ಇಪಿಎಸ್‌ 95 ರಾಷ್ಟ್ರೀಯ ಸಂಘರ್ಷ ಸಮಿತಿ ದಾವಣಗೆರೆ ವತಿಯಿಂದ ಶನಿವಾರ ನಡೆದ ರಾಜ್ಯಮಟ್ಟದ ಇಪಿಎಸ್ 95 ಪಿಂಚಣಿದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಗಲು, ಇರುಳು ಎನ್ನದೇ ಕಷ್ಟಪಟ್ಟು ದುಡಿಯುವ ಮೂಲಕ ನಿವೃತ್ತ ನೌಕರರು ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ನಿವೃತ್ತಿಯ ನಂತರ ಆರೋಗ್ಯ ಸೇರಿದಂತೆ ಇನ್ನಿತರ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅವುಗಳನ್ನು ಎದುರಿಸಲು ಈಗ ನೀಡುತ್ತಿರುವ ಪಿಂಚಣಿ ಹಣ ಸಾಲುತ್ತಿಲ್ಲ. ಸರ್ಕಾರ ಅವರಿಗೆ ನ್ಯಾಯಯುತ ಪಿಂಚಣಿ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಪಿಂಚಣಿದಾರರಿಗೆ ಸಂಬಂಧ ಪಟ್ಟಂತೆ ನವೆಂಬರ್ 4ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಇದನ್ನು ಅನುಷ್ಠಾನಗೊಳಿಸಲು ಸರ್ಕಾರಕ್ಕೆ 4 ತಿಂಗಳ ಗಡುವು ನೀಡಿದೆ. ಸರ್ಕಾರದ ಯಾವ ರೀತಿ ಕ್ರಮ ಕೈಗೊಳ್ಳುತ್ತದೋ ಕಾದು ನೋಡಿ ಆ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ರಾಷ್ಟ್ರೀಯ ಭವಿಷ್ಯ ನಿಧಿ ಪಿಂಚಣಿ ಇಲಾಖೆಯಿಂದ ಅತ್ಯಲ್ಪ ಮೊತ್ತದ ಪಿಂಚಣಿ ಬರುತ್ತಿದ್ದು, ಜೀವನ ನಿರ್ವಹಣೆ ಮಾಡಲು ಇದರಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕನಿಷ್ಠ ₹7,500 ಜೊತೆಗೆ ಡಿಎ ಹಾಗೂ ಆರೋಗ್ಯ ಸೌಲಭ್ಯ, ಶೇ 100ರಷ್ಟು ವಿಧವೆ ಪಿಂಚಣಿ, ಇಪಿಎಸ್ ವಂಚಿತರಿಗೆ ₹ 5,000 ನೀಡಬೇಕು’ ಎಂದು ಎನ್‌ಎಸಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ನಂಜುಂಡೇಗೌಡ ಆಗ್ರಹಿಸಿದರು.

‘ನವೆಂಬರ್ 4ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗಿದ್ದು, ಆದೇಶವನ್ನು ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ಪರಿಶೀಲಿಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲು ಸಂಘದಿಂದ ಡಿಸೆಂಬರ್ 1ರಂದು ಸಭೆ ಸೇರಿ ಅಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಸರ್ಕಾರಗಳು ನಮಗೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಮುಂದಿನ ಮಾರ್ಚ್‌ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಮುಂಚೆ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮಿಳುನಾಡು ಹಾಗೂ ತೆಲಂಗಾಣ ಮಾದರಿಯಂತೆ ಪಿಂಚಣಿ ನೀಡುವಂತೆ ಮನವಿ ಸಲ್ಲಿಸಲಾಗುವುದು. ಬೇಡಿಕೆಗೆ ಸ್ಪಂದಿಸದೇ ಇದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕೋಣ’ ಎಂದುರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್‌.ಎಂ. ಸ್ವಾಮಿ ಹೇಳಿದರು.

ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ವೀರೇಂದ್ರ ಸಿಂಗ್, ದಕ್ಷಿಣ ಭಾರತ ಮುಖ್ಯ ಸಂಯೋಜಕ ರಮಾಕಾಂತ ನರಗುಂದ, ಐಟಿ ಸಂಯೋಜಕ ಸಿ.ಎನ್‌. ಮಂಜುನಾಥ್, ರಾಷ್ಟ್ರೀಯ ಸಂಯೋಜಕ ಪಾಂಡುರಂಗ ಎನ್.ಪಾಟೀಲ್, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಮರುಳಸಿದ್ದಯ್ಯ, ಸಮಿತಿಯ ಕೆ.ಎಸ್‌. ಗೋಪಾಲಕೃಷ್ಣ, ಸುನಿತಾ ನಾರ್ಖಡೆ, ಶೋಭಾ ಅರಸ್, ಸ್ವಾಮಿ, ಚನ್ನಬಸಪ್ಪ, ಮಲ್ಲೇಶಪ್ಪ, ಎಂ.ಶಾಂತಪ್ಪ, ಮಹದೇವಯ್ಯ, ವೀರಭದ್ರಯ್ಯ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.