ADVERTISEMENT

ಬೆಂಕಿ: ಹೊತ್ತಿ ಉರಿದ ಕಾರು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:44 IST
Last Updated 9 ಆಗಸ್ಟ್ 2019, 19:44 IST
ಕಾರಿಗೆ ಬಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು
ಕಾರಿಗೆ ಬಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು   

ದಾವಣಗೆರೆ: ಕಾರಿನ ಎಂಜಿನ್‌ ಬಿಸಿಯಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಬೆಂಗಳೂರಿನಿಂದ ದಾವಣಗೆರೆ ಬರುತ್ತಿರುವಾಗ ಹೆಬ್ಬಾಳು ಟೋಲ್ ಗೇಟ್ ಬಳಿ ಚಲಿಸುತ್ತಿದ್ದ ಟಾಟಾ ಜೆಸ್ಟ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರಿನಲ್ಲಿದ್ದ ಚಾಲಕ ಕಾರಿನ ಬಾಗಿಲು ತೆರೆದು ಹೊರ ಬಂದಿದ್ದಾರೆ.

ದಾವಣಗೆರೆಯ ದೊಡ್ಡ ಬಾತಿ ಗ್ರಾಮದ ಮಾರುತಿ ಅವರಿಗೆ ಸೇರಿದ ಕಾರು ಇದಾಗಿದ್ದು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿ ನಂದಿಸಿದರು. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಬೀಗ ಮುರಿದು ಕಳ್ಳತನ

ದಾವಣಗೆರೆ: ಇಲ್ಲಿನ ಕೆಟಿಜೆ ನಗರದ ಚಿರಂಜೀವಿ ಸ್ಕೂಲ್ ಬಳಿಯ ಮನೆಯೊಂದರ ಇಂಟರ್‌ಲಾಕ್ ಮುರಿದಿರುವ ಕಳ್ಳರು ಬೀರುವಿನಲ್ಲಿಟ್ಟದ ₹24 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ.

ಬಡಾವಣೆಯ ಅಜ್ಜಪ್ಪ ಅವರ ಪತ್ನಿ ಸಿದ್ದಮ್ಮ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಇವರ ಪುತ್ರಿ ಸೌಮ್ಯ ದಾವಣಗೆರೆ ತಾಲ್ಲೂಕಿನ ವಡ್ಡಿಹಳ್ಳಿಗೆ ಹೋಗಿದ್ದಾಗ ಮನೆ ಬಾಗಿಲ ಇಂಟರ್ ಲಾಕ್ ಅನ್ನು ಕಬ್ಬಿಣದ ಆಯುಧಿಂದ ಮುರಿದು ಒಳನುಗ್ಗಿದ ಕಳ್ಳರು ಬೆಡ್ ರೂಂನಲ್ಲಿದ್ದ ಬೀರುವಿನ ಬಾಗಿಲು ಮುರಿದು 9 ಗ್ರಾಂ ತೂಕದ ಒಂದು ಜೊತೆ ಬಂಗಾರದ ಜುಮುಕಿ ಬೆಂಡೋಲೆ, 4 ಗ್ರಾಂನ ಒಂದು ಜೊತೆ ಬಂಗಾರದ ಕಿವಿಯೋಲೆ, 40 ಗ್ರಾಂ ತೂಕದ 2 ಬೆಳ್ಳಿ ಕುಂಕುಮ ಬಟ್ಟಲು ಹಾಗೂ ಒಂದು ಜೊತೆ ಬೆಳ್ಳಿ ಕಾಲು ಚೈನ್ ಕಳ್ಳತನ ಮಾಡಿದ್ದಾರೆ. ಕೆಟಿಜೆ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ

ಹೊನ್ನಾಳಿಯ ದುರ್ಗಿಗುಡಿ ಬಡಾವಣೆಯಲ್ಲಿ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕಳ್ಳನೊಬ್ಬ ಪರಾರಿಯಾಗಿದ್ದಾನೆ.

ಪಟ್ಟಣದ ಗೀತಾ ಬಸವರಾಜ್ ಸರ ಕಳೆದುಕೊಂಡವರು. ರಾತ್ರಿ ಕಿರಾಣಿ ಬಾಗಿ ಮುಚ್ಚಿಕೊಂಡು ಬರುತ್ತಿರುವ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಳ್ಳ ಮಹಿಳೆಯ ಬಾಯನ್ನು ಮುಚ್ಚಿ ನೆಲಕ್ಕೆ ಕೆಡವಿ ಕುತ್ತಿಗೆಗೆ ಕೈ ಹಾಕಿದ್ದಾನೆ. ಇದನ್ನು ಅರಿತ ಗೀತಾ ಅವರು ಎಡಗೈಯಲ್ಲಿ ಸರವನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಆಗ ಅರ್ಧ ಸರವನ್ನೇ ಕಿತ್ತುಕೊಂಡು ಹೋಗಿದ್ದಾನೆ.

40 ಗ್ರಾಂ ಮೌಲ್ಯದ ಈ ಸರದಲ್ಲಿ 20 ಗ್ರಾಂ ಅಂದರೆ ₹40ಸಾವಿರ ಬೆಲೆ ಬಾಳುತ್ತದೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮೀನರ ಮೇಲೆ ಹಲ್ಲೆ ಮಾಡಿದವನಿಗೆ ನ್ಯಾಯಾಂಗ ಬಂಧನ

ಚನ್ನಗಿರಿ ನ್ಯಾಯಾಲಯದಲ್ಲಿ ಅಮೀನರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮನೋಹರ ಎಂಬುವರ ಮೇಲೆ ಹಲ್ಲೆ ಮಾಡಿದ ಆರೋ‍ಪದ ಮೇರೆಗೆ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂಗಾಹಳ್ಳಿ ಗ್ರಾಮಕ್ಕೆ ನೋಟಿಸ್ ಜಾರಿ ಮಾಡಲು ಗ್ರಾಮಕ್ಕೆ ಹೋದಾಗ ಮಂಜಪ್ಪ ಎಂಬಾತ ಕೊರಳಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾನೆ. ಆಗ ಚನ್ನಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ್ ಅವರು ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದ್ದಾರೆ. ಬಸವಾಪಟ್ಟಣ ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ಮನೆಯ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.