ADVERTISEMENT

ನಿಶ್ಶಕ್ತರಾದ ಸಿದ್ದರಾಮಯ್ಯ: ಸಿ.ಎಂ.ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 5:35 IST
Last Updated 14 ಫೆಬ್ರುವರಿ 2022, 5:35 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ದಾವಣಗೆರೆ: ‘ನನ್ನ ವಿಚಾರದಲ್ಲಿ ಸಿದ್ದರಾಮಯ್ಯ ನಿಶ್ಶಕ್ತರಾಗಿದ್ದಾರೆ. ಅವರ ಕೈಯಲ್ಲಿ ಎನೂ ಇಲ್ಲ. ಎಲ್ಲವೂ ದೆಹಲಿಯಲ್ಲಿದೆ. ನಾನು ಕಾಂಗ್ರೆಸ್ ತೊರೆದರೆ ಬಹಳಷ್ಟು ಜನ ಕಾಂಗ್ರೆಸ್‌ನಿಂದ ಹೊರಬರಲಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ತಿಳಿಸಿದರು.

ದಾವಣಗೆರೆಯಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ಕಾಂಗ್ರೆಸ್‌ ಹೈಕಮಾಂಡ್‌ ಕಾಯಲು ನನಗೆ ಹೇಳಿದೆ. ಕಾಯುತ್ತೇನೆ. ಏನೇ ಮಾತನಾಡಿದರೂ ನನ್ನ ನಿರ್ಧಾರವೇ ಅಂತಿಮ. ಸದ್ಯದಲ್ಲಿಯೇ ನಿರ್ಧಾರ ಪ್ರಕಟಿಸುವೆ. ನಾನು ಈಗಲೇ ರಾಜೀನಾಮೆ ನೀಡಿದರೆ ಬಜೆಟ್‌ ಅಧಿವೇಶನದಲ್ಲಿ ಬಿಜೆಪಿ ಕೈ ಮೇಲಾಗುತ್ತದೆ’ ಎಂದು ಹೇಳಿದರು.

‘ನಾನು ವಕ್ಫ್‌ ಬೋರ್ಡ್‌ ಭೂಮಿ ಹೊಡೆದಿದ್ದೇನೆ ಎಂದು ಹೇಳಿರುವ ವಿ.ಎಸ್‌. ಉಗ್ರಪ್ಪ ಗಂಡಸೇ ಆಗಿದ್ದರೆ ಅದನ್ನು ಸಾಬೀತುಪಡಿಸಬೇಕು. ಅನ್ವರ್‌ ಮಾಣಿಪ್ಪಾಡಿ ವರದಿಯಲ್ಲಿ ನನ್ನ ಬಗ್ಗೆ ಆರೋಪ ಇತ್ತು. ನಾನು ಕೇಸ್‌ ಹಾಕಿದಾಗ ಸಾಬೀತು ಮಾಡಲಾಗದೇ ಸುಮ್ಮನಾದರು. ಆ ವರದಿಯನ್ನು ಉಗ್ರಪ್ಪ ಸಿಬಿಐಗೆ ಬೇಕಿದ್ದರೂ ಒಪ್ಪಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಉಗ್ರಪ್ಪ ವಕೀಲ ನಾನು ಅವರ ಕಕ್ಷಿದಾರ ಎಂದು ಉಗ್ರಪ್ಪ ಹೇಳಿದ್ದಾರೆ. ಅದು ಅವರ ವೃತ್ತಿ. ಆದರೆ ಕಕ್ಷಿದಾರನ ಪರ ಇರುವ ಬದಲು ವಿರುದ್ಧ ವಾದ ಮಂಡಿಸುತ್ತಿದ್ದಾರಲ್ಲ’ ಎಂದು ವ್ಯಂಗ್ಯ ಮಾಡಿದರು.

‘ರಾಜ್ಯದಲ್ಲಿ ಬಿಜೆಪಿ ಕಥೆ ಮುಗಿದಿದೆ. ಸುಡಬೇಕೋ ಹೂಳಬೇಕೋ ಎನ್ನುವುದಷ್ಟೇ ಉಳಿದಿದೆ. ಬಸವಕೃಪಾ ಆದ್ರೆ ಹೂಳಬೇಕು. ಕೇಶವ ಕೃಪಾ ಆದ್ರೆ ಸುಡಬೇಕು. ಬಸವರಾಜ್ ಬೊಮ್ಮಾಯಿ ಪಂಚರ್‌ ಆದ ಬಸ್ಸು. ರಾಜ್ಯದಲ್ಲಿ ಶೀಘ್ರ ರಾಷ್ಟ್ರಪತಿ ಆಳ್ವಿಕೆ ಬರಲಿದೆ’ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.