ನ್ಯಾಮತಿ: ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನಾ ಕಾರ್ಯಕ್ರಮ ಗುರುವಾರ ಪಟ್ಟಣದಲ್ಲಿ ವಿಶೇಷವಾಗಿ ನಡೆಯಿತು.
ಈ ಬಾರಿ ಚಿಕ್ಕಬಳ್ಳಾಪುರದಿಂದ ಬಂದಿದ್ದ ಜಾನಪದ ಕಲಾ ತಂಡದವರ ವೀರಗಾಸೆ ಪ್ರದರ್ಶನ, ಬೆಂಕಿ ಸುರಿಯುವುದು, ರಂಗೋಲಿಯೊಳಗೆ ಜಾನಪದ ನೃತ್ಯ, ಶಿವಮೊಗ್ಗದಿಂದ ಬಂದಿದ್ದ ನಾಗಸ್ವರ ತಂಡದವರು ಗಮನಸೆಳೆದರು. ಕಿತ್ತೂರು ರಾಣಿ ಚನ್ಮಮ್ಮ ವೃತ್ತದ ವೇದಿಕೆಯಲ್ಲಿ ಅಮರ್ ಜವಾನ್ ಪ್ರತಿಮೆ ನಿರ್ಮಾಣ ಮಾಡಿ ಕಾರ್ಗಲ್ –25ರ ಸಂಭ್ರಮ ಆಚರಿಸಲಾಯಿತು.
ಮಾಜಿ ಸೈನಿಕರು, ಗೃಹರಕ್ಷಕ ದಳದ ಸಿಬ್ಬಂದಿ, ಸ್ಥಳೀಯ ಪೊಲೀಸರು ಸಮವಸ್ತ್ರ ಧರಿಸಿ ಅಮರರಾದ ವೀರಯೋಧರಿಗೆ ಭಕ್ತಿಪೂರ್ವಕ ವಂದನೆ ಸಲ್ಲಿಸಿದ್ದು, ಸಾರ್ವಜನಿಕರ ಮೆಚ್ಚುಗೆ ಪಡೆಯಿತು.
‘ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಪರಿಸರ ಮಾಲಿನ್ಯ ಉಂಟು ಮಾಡುವ ಡಿಜೆಯನ್ನು ನಾವು ಬಳಸುವುದಿಲ್ಲ. ಜಾನಪದ ಕಲೆಗಳನ್ನು ಉಳಿಸಿ ಬೆಳಸಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜಾನಪದ ಕಲಾ ತಂಡಗಳನ್ನು ಕರೆಸುತ್ತೇವೆ’ ಎಂದು ಪೇಟೆ ಬಸವೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ಯಲಬುರ್ಗಿ ಸಂತೋಷಕುಮಾರ ಹಾಗೂ ಪದಾಧಿಕಾರಿಗಳು ಹೇಳಿದರು.
ಪೇಟೆ ಬಸವೇಶ್ವರ ದೇವಾಲಯ ಟ್ರಸ್ಟ್, ವಿನಾಯಕ ಸೇವಾ ಸಮಿತಿ, ಮಹಿಳಾ ಘಟಕದ ಸದಸ್ಯರು ವಿಸರ್ಜನಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.