ದಾವಣಗೆರೆ: ಬ್ರಿಟಿಷರಿಂದ ರಾಜಕೀಯ ಅಧಿಕಾರ, ಸ್ವಾತಂತ್ರ್ಯ ಪಡೆದರೂ ಅವರ ನೆರಳಿನಿಂದ ಹೊರಬರಲು ಸಾಧ್ಯವಾಗಿಲ್ಲ. ಬ್ರಿಟಿಷರ ಬಗೆಗಿನ ಮೇಲರಿಮೆ ತೊರೆದು ಭಾರತೀಯ ಸಾಹಿತ್ಯ ಸೃಷ್ಟಿಸುವ ಅಗತ್ಯವಿದೆ ಎಂದು ಸಾಹಿತಿ ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟರು.
ಇಲ್ಲಿನ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 4ನೇ ಅಧಿವೇಶನದಲ್ಲಿ ‘ಸಾಹಿತ್ಯದಲ್ಲಿ ‘ಸ್ವ’ತ್ವದ ಅಭಿವ್ಯಕ್ತಿ’ ಕುರಿತು ನಡೆದ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮಾತೃ ಭಾಷೆಯಲ್ಲಿ ಸಾಹಿತ್ಯ ರಚಿಸಿದರೆ ‘ಸ್ವ’ತ್ವ ಉಳಿಯುತ್ತದೆ ಎಂಬ ಮಾತಿದೆ. ಮಾತೃ ಭಾಷೆ ಬೇರೆಯಾಗಿದ್ದರೂ ಕನ್ನಡದಲ್ಲಿ ಅತ್ಯುತ್ತಮ ಸಾಹಿತ್ಯ ರಚಿಸಿದ ಸಾಕಷ್ಟು ಲೇಖಕರು ರಾಜ್ಯದಲ್ಲಿದ್ದಾರೆ. ಸಾಹಿತ್ಯದ ಮೂಲತಾತ್ಪರ್ಯವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ಸೃಜನಶೀಲ ಬರಹವು ಭಾವನೆಯನ್ನ ಪ್ರತಿನಿಧಿಸುತ್ತದೆ. ಅನುವಾದದಲ್ಲಿ ಭಾವ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಸಂಸ್ಕೃತಿಯನ್ನು ಕಟ್ಟುವ, ಒಡೆಯುವ ಕೆಲಸ ಅನುವಾದದಿಂದ ಆಗುತ್ತದೆ. ಅನುವಾದ ಮಾಡುವಾಗ ಎಚ್ಚರಿಕೆಯಿಂದ ಇರಬೇಕು’ ಎಂದು ಪತ್ರಕರ್ತ ಸೂರ್ಯಪ್ರಕಾಶ್ ಪಂಡಿತ್ ಸಲಹೆ ನೀಡಿದರು.
‘ಮನಸ್ಸಿನ ಭಾವನೆಗಳಿಗೆ ಗಡಿ ಇಲ್ಲ. ಮನುಷ್ಯನ ಮೂಲಗ್ರಹಿಕೆಗಳು ಒಂದೇ ಆಗಿವೆ. ಆದರೆ, ಸಾಂಸ್ಕೃತಿಕ ಭಿನ್ನತೆಗಳಿವೆ’ ಎಂದರು.
ಸಹನಾ ವಿಜಯಕುಮಾರ್, ನೀತಾ ರಾವ್, ದೀಪಾ ಜೋಷಿ, ಸುಧಾಕರ ಹೊಸಹಳ್ಳಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.