ADVERTISEMENT

ದಾವಣಗೆರೆ: ನಕಲಿ ಬಂಗಾರ ನೀಡಿ ₹3.50 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 15:20 IST
Last Updated 4 ಫೆಬ್ರುವರಿ 2020, 15:20 IST

ದಾವಣಗೆರೆ: ವ್ಯಕ್ತಿಯೊಬ್ಬರಿಗೆ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ₹3.50 ಲಕ್ಷವನ್ನು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಮೂಡ್ಲಪಾಳ್ಯದ ನಿವಾಸಿ ಶ್ರೀನಿವಾಸ ಮೋಸ ಹೋದವರು. ಶಿವಮೊಗ್ಗದ ಹರೀಶ್ ಹಾಗೂ ಆತನ ಸಹಚರ ಮೋಸ ಮಾಡಿದವರು.

ಹೋಟೆಲ್‌ನಲ್ಲಿ ಕೆಲಸ ಮಾಡುವ ಶ್ರೀನಿವಾಸ್‌ಗೆ ಕರೆ ಮಾಡಿದ ಹರೀಶ್ ‘ನಾನು ನಿಮ್ಮ ಹೋಟೆಲ್‌ಗೆ ಪ್ರತಿ ದಿವಸ ಬರುತ್ತೇನೆ. ನೀವು ನನ್ನನ್ನು ನೋಡಿದ್ದೀರಿ’ ಎಂದು ಪರಿಚಯ ಮಾಡಿಕೊಂಡ.

ADVERTISEMENT

ಮತ್ತೊಂದು ದಿವಸ ಕರೆ ಮಾಡಿ ‘ಕಲಬುರ್ಗಿಯಲ್ಲಿರುವ ನನ್ನ ಅಜ್ಜನವರು ಒಂದು ತಿಂಗಳ ಹಿಂದೆ ಮನೆ ಫೌಂಡೇಶನ್‌ ತೆಗೆಯುತ್ತಿರುವಾಗ ಅವರಿಗೆ ಐದು ಗಡಿಗೆ ನಿಧಿ ಸಿಕ್ಕಿದೆ. ನಿಮಗೆ ಬೇಕಾದರೆ ಒಂದು ಕೆ.ಜಿಯಷ್ಟು ಕೊಡುತ್ತೇನೆ. ಈ ವಿಷಯವನ್ನು ಯಾರಿಗೂ ಹೇಳಬೇಡ. ಬೇಕಾದರೆ ಸ್ಯಾಂಪಲ್ ಕೊಡುತ್ತೇನೆ ಶಿವಮೊಗ್ಗಕ್ಕೆ ಬನ್ನಿ’ ಎಂದು ತಿಳಿಸಿದ್ದಾನೆ.

ಅದರಂತೆ ಶ್ರೀನಿವಾಸ ಶಿವಮೊಗ್ಗಕ್ಕೆ ಬಂದಿದ್ದು, ನಂತರ ಚೀಲೂರಿಗೆ ಕರೆಸಿಕೊಂಡ ಹರೀಶ್ ಕರೆಸಿಕೊಂಡಿದ್ದಾನೆ. ಒಂದು ಬಿಲ್ಲೆಯನ್ನು ನೀಡಿದ್ದಾನೆ. ಇದನ್ನು ಪರೀಕ್ಷಿಸಿದಾಗ ಅದು ಅಸಲಿ ಬಂಗಾರವಾಗಿತ್ತು. ಆನಂತರ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ಒಂದು ಕೆಜಿ ಬಂಗಾರ ನೀಡುತ್ತೇನೆ. ₹5 ಲಕ್ಷ ಕೊಟ್ಟರೆ ಸಾಕು’ ಎಂದು ಹೇಳಿ ನಂಬಿಸಿದ್ದಾನೆ.

ಇದನ್ನು ನಂಬಿದ ಶ್ರೀನಿವಾಸ್ ₹ 3.50 ಲಕ್ಷ ತೆಗೆದುಕೊಂಡು ಚೀಲೂರಿಗೆ ಬಂದಾಗ ಆರೋಪಿಗಳು ಹಣ ತೆಗೆದುಕೊಂಡು ಬೈಕ್ ಹತ್ತಿ ಪರಾರಿಯಾಗಿದ್ದಾರೆ.

ನ್ಯಾಮತಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.