ದಾವಣಗೆರೆ: ಸ್ವತಂತ್ರ ಚಿಂತನೆ ಮತ್ತು ವಿಶ್ಲೇಷಣಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳದ ಹೊರತು, ಎಷ್ಟೇ ಪದವಿ ಗಳಿಸಿದರೂ ಪ್ರಯೋಜನವಿಲ್ಲ ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಎಸ್.ಆರ್. ಶಂಕಪಾಲ್ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ‘ಕೃತಕ ಬುದ್ದಿಮತ್ತೆಯ ಏಕೀಕರಣದೊಂದಿಗೆ ಯಾಂತ್ರಿಕ ಮತ್ತು ರೊಬೊಟಿಕ್ ವ್ಯವಸ್ಥೆಗಳು’ ಕುರಿತು ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಕೈಗಾರಿಕೆಗಳು ಮತ್ತು ದೈನಂದಿನ ಜಗತ್ತಿನಲ್ಲಿ ತಂತ್ರಜ್ಞಾನ ವೇಗವಾಗಿ ವಿಕಸನಗೊಳ್ಳುತ್ತಿದೆ. ತಂತ್ರಜ್ಞಾನ ಸುಧಾರಿಸಲು ಪ್ರಯತ್ನಿಸಬೇಕು. ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನವನ್ನು ಹೇಗೆ ಅನ್ವಯಿಸಬೇಕು ಎಂಬುದರ ಕುರಿತು ಯೋಚಿಸಬೇಕು’ ಎಂದು ಸಲಹೆ ನೀಡಿದರು.
‘ಸ್ಕೈವರ್ಕ್ಸ್ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ವ್ಯವಸ್ಥಾಪಕ ಅಜಯ್ ಬಸ್ತಿ, ‘ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದು ಸೆಮಿಕಂಡಕ್ಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಕ್ಷೇತ್ರ ಪ್ರವೇಶಿಸಲು ಯಾರಿಗೂ ಮಿತಿಗಳಿಲ್ಲ. ಸಂಶೋಧನೆ ಮತ್ತು ಆವಿಷ್ಕಾರಗಳು ನಿರಂತರವಾಗಿರಲಿ’ ಎಂದು ಹೇಳಿದರು.
ಬೆಂಗಳೂರಿನ ಟ್ರೈಡೆಂಟ್ ಟೆಕ್ಲ್ಯಾಬ್ಸ್ ಲಿಮಿಟೆಡ್ನ ವ್ಯವಸ್ಥಾಪಕ ಅಜಿತ್ ಗೋಪಿನಾಥ್, ವಿಶ್ವವಿದ್ಯಾಲಯದ ಸಂಶೋಧನಾ ಸಲಹೆಗಾರ ಸಿ.ಎಸ್. ರಮೇಶ್, ಸಂಶೋಧನೆ ಮತ್ತು ನಾವೀನ್ಯತೆ ವಿಭಾಗದ ಡೀನ್ ಕೆ.ಎನ್. ಭರತ್, ಪ್ರವೀಣ್ ಜೆ, ಸಂಜಯ್ ಪಾಂಡೆ ಎಂ.ಬಿ., ಶ್ರೀನಿವಾಸ ಸಿ.ವಿ., ರಾಜಶೇಖರ್ ಸೋಮಸಾಗರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.