ADVERTISEMENT

ಸ್ಫೋಟಕ ಸಾಮಗ್ರಿಗಳ ಗೋಡೌನ್ ಜಪ್ತಿ

ಹುಣಸೋಡು ಘಟನೆ: ಮುನ್ನೆಚ್ಚರಿಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 5:40 IST
Last Updated 24 ಜನವರಿ 2021, 5:40 IST
ಕಲ್ಲುಗಣಿ ಕ್ವಾರಿಗಳಿಗೆ ಸರಬರಾಜು ಮಾಡಲು ದಾಸ್ತಾನು ಮಾಡಿದ್ದ ಸ್ಫೋಟಕ ಸಾಮಗ್ರಿಗಳನ್ನು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದಲ್ಲಿ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದುಕೊಂಡರು.
ಕಲ್ಲುಗಣಿ ಕ್ವಾರಿಗಳಿಗೆ ಸರಬರಾಜು ಮಾಡಲು ದಾಸ್ತಾನು ಮಾಡಿದ್ದ ಸ್ಫೋಟಕ ಸಾಮಗ್ರಿಗಳನ್ನು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದಲ್ಲಿ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದುಕೊಂಡರು.   

ಪ್ರಜಾವಾಣಿ ವಾರ್ತೆ

ದಾವಣಗೆರೆ: ಶಿವಮೊಗ್ಗದ ಹುಣಸೋಡು ಘಟನೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿಜಿಲ್ಲೆಯ ಎರಡು ಕಡೆಗಳಲ್ಲಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದಲ್ಲಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿದರು. ಕಲ್ಲುಗಣಿ ಕ್ವಾರಿಗಳಿಗೆ ಸರಬರಾಜು ಮಾಡಲು ದಾಸ್ತಾನು ಮಾಡಿದ್ದ ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡರು.

ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮದ ಗೋಡೌನ್‌ನಲ್ಲಿ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಲು ಪರವಾನಗಿ ಇತ್ತಾದರೂ ಅಮಾನತಿನಲ್ಲಿಡಲಾಗಿತ್ತು. ಹಾಗಾಗಿ ಅದು ಮೊದಲೇ ಜಪ್ತಿ ಆಗಿತ್ತು.

ADVERTISEMENT

ಜಗಳೂರು ತಾಲೂಕು ಹುಚ್ಚವ್ವನಹಳ್ಳಿ-ತಾಯಿಟೋಣಿ ಗ್ರಾಮಗಳ ನಡುವಿನ ಜಮೀನಿನಲ್ಲಿದ್ದ ಗೋಡೌನ್‌ಗೆ ತೆರಳಿ ಅಲ್ಲಿ ದಾಸ್ತಾನು ಮಾಡಲಾಗಿದ್ದ, ಸ್ಫೋಟಕ್ಕೆ ಬಳಸುವ ಜಿಲೆಟಿನ್, ಎಲೆಕ್ಟ್ರಿಕಲ್ ಡಿಟೋನೇಟರ್‌ಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ‘ಜಿಲ್ಲಾಧಿಕಾರಿ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆಸಲಾಯಿತು. ಸದ್ಯಕ್ಕೆ ಸ್ಫೋಟ ಚಟುವಟಿಕೆಗಳನ್ನು ನಡೆಸುವುದು ಬೇಡ ಎಂಬ ಕಾರಣಕ್ಕೆ ಅವುಗಳನ್ನು ವಶಕ್ಕೆ ಪಡೆಯಲಾಯಿತು’ ಎಂದು ತಿಳಿಸಿದರು.

ಇಲ್ಲಿ ಸಂಗ್ರಹಿಸಿದ ಸ್ಫೋಟಕ ಸಾಮಗ್ರಿಗಳನ್ನು ಅಕ್ಕಪಕ್ಕದ ಕ್ವಾರಿಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಅವುಗಳು ಅಪಾರ ಪ್ರಮಾಣದಲ್ಲಿವೆ. ಆದರೆ ಅಗ್ನಿಶಮನ ಉಪಕರಣಗಳನ್ನು ಇಡುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಜಗಳೂರು ತಾಲ್ಲೂಕಿನಲ್ಲಿ ದಾಸ್ತಾನು ಮಾಡಿದವರು ಆಂಧ್ರ ಮೂಲದವರು ಎಂದು ತಿಳಿದುಬಂದಿದೆ. ಗ್ರಾಮಾಂತರ ಡಿವೈಎಸ್ ನರಸಿಂಹ ತಾಮ್ರಧ್ವಜ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವಿ. ಕೋದಂಡರಾಮ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ, ಇನ್ನಿತರ ಅಧಿಕಾರಿಗಳು ಕಾರ್ಯಾಚರಣೆ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.