ADVERTISEMENT

ಪ್ರೇರಣೆಯಿಂದ ಒಳಿತು, ಪ್ರಚೋದನೆಯಿಂದ ಕೆಡುಕು

ಶರಣ ಸಂಗಮದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 5:12 IST
Last Updated 4 ಫೆಬ್ರುವರಿ 2021, 5:12 IST
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ. ಅನಿತಾ ಎಚ್. ದೊಡ್ಡಗೌಡರ್‌ ಉಪನ್ಯಾಸ ನೀಡಿದರು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಅಹಿಂದ ಪ್ರಜಾಶಕ್ತಿ ರಾಜ್ಯಾಧ್ಯಕ್ಷ ಗೋವಿಂದರಾಜು ಜಿ.ಎಂ., ಲಿಂಗದೇವಿ ಗುಬ್ಬಿ ಅವರೂ ಇದ್ದರು.
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ. ಅನಿತಾ ಎಚ್. ದೊಡ್ಡಗೌಡರ್‌ ಉಪನ್ಯಾಸ ನೀಡಿದರು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಅಹಿಂದ ಪ್ರಜಾಶಕ್ತಿ ರಾಜ್ಯಾಧ್ಯಕ್ಷ ಗೋವಿಂದರಾಜು ಜಿ.ಎಂ., ಲಿಂಗದೇವಿ ಗುಬ್ಬಿ ಅವರೂ ಇದ್ದರು.   

ದಾವಣಗೆರೆ: ಮನುಷ್ಯನಿಗೆ ಪ್ರೇರಣೆ ತುಂಬಿದಾಗ ಒಳ್ಳೆಯ ಕಾರ್ಯಗಳು ಆಗುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಪ್ರಚೋದನೆ ಮಾಡಿ ಕೆರಳಿಸಿ ಕೆಟ್ಟ ಕೆಲಸಗಳನ್ನು ಮಾಡಿಸುತ್ತವೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಬಸವಕೇಂದ್ರ ಶಿವಯೋಗಾಶ್ರಮದಲ್ಲಿ ಬುಧವಾರ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬದುಕಲ್ಲಿ ಪ್ರೇರಣೆ ಅರಳಿಸುತ್ತದೆ. ಪ್ರಚೋದನೆ ಕೆರಳಿಸುತ್ತದೆ. ಮುಗ್ಧರು, ಸ್ವಂತ ವಿಚಾರ ಮಾಡುವ ವಿವೇಕ ಇಲ್ಲದವರನ್ನು ಕೆರಳಿಸುವುದು ಸುಲಭ. ಹಾಗಾಗಿ ಯಾರೇ ಕೆರಳಿಸಿದರೂ ಕೆರಳದೇ ವಿವೇಚನೆ ಮಾಡುವ ಶಕ್ತಿಯನ್ನು ಬೆಳೆಸಿಕೊಂಡರೆ ಕೆಟ್ಟ ಕೃತ್ಯಗಳು ಆಗುವುದಿಲ್ಲ ಎದು ತಿಳಿಸಿದರು.

ADVERTISEMENT

ಜಲಪ್ರಳಯ, ಜ್ವಾಲಾಮುಖಿ, ಮಹಾಪ್ರವಾಹಗಳಿಂದಾಗುವ ಅನಾಹುತಕ್ಕಿಂತ ಬುದ್ಧಿ ಪ್ರಳಯದಿಂದ ಆಗುವ ಅನಾಹುತ ದೊಡ್ಡದು. ಬುದ್ಧಿಯನ್ನು ಸ್ಥಿಮಿತದಲ್ಲಿಟ್ಟುಕೊಂಡು ಸಮತೋಲನದ ನಡೆ ಕಾಪಾಡಿಕೊಂಡಾಗ ಸಾಧನೆ ಸಾಧ್ಯ ಎಂದು ಸಲಹೆ ನೀಡಿದರು.

ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ಎಚ್‌. ದೊಡ್ಡಗೌಡರ್‌, ‘ಕೆರಳುವಿಕೆ ಮತ್ತು ಸಮತೋಲನ’ ಬಗ್ಗೆ ಉಪನ್ಯಾಸ ನೀಡಿ, ‘ಮನುಷ್ಯ ದಿನ್ 24 ಗಂಟೆಗಳನ್ನು ಮೂರು ವಿಂಗಡನೆ ಮಾಡಿಕೊಳ್ಳಬೇಕು. 8 ಗಂಟೆ ವಿಶ್ರಾಂತಿ, 8 ಗಂಟೆ ಸರಿಯಾದ ದುಡಿಮೆ, 8 ಗಂಟೆ ತನ್ನವರಿಗಾಗಿ, ತನಗಾಗಿ ಮೀಸಲಿಟ್ಟರೆ ನೆಮ್ಮದಿಯಾಗಿ ಜೀವನ ಮಾಡಲು ಸಾಧ್ಯ. ಸ್ವಯಂ ಕಾಳಜಿ, ಸಮಯ ಪಾಲನೆ, ಬೇರೆಯವರ ಮಾತಿಗೆ ತಲೆಬಿಸಿ ಮಾಡದೇ ಇರುವುದನ್ನು ವ್ಯಕ್ತಿತ್ವದಲ್ಲಿ ರೂಢಿಸಿಕೊಂಡರೆ ನಮ್ಮನ್ನು ಯಾರೂ ಕೆರಳಿಸಲು ಸಾಧ್ಯವಿಲ್ಲ. ಮನಸ್ಸು ಸಮತೋಲನದಲ್ಲಿದ್ದರೆ ಯಾರಿಂದಲೂ ಹಾಳು ಮಾಡಲು ಆಗದು’ ಎಂದು ವಿಶ್ಲೇಷಿಸಿದರು.

ಮನೆಯ ವಾತಾವರಣ, ಕಚೇರಿ ವಾತಾವರಣ, ಸಮುದಾಯದ ವಾತಾವರಣ ಮತ್ತು ಸಮಾಜದ ವಾತಾವರಣ ಕೂಡ ಮನಸ್ಸನ್ನು ಕೆರಳಿಸಲು ಕಾರಣಗಳಾಗುತ್ತವೆ. ಅವೆಲ್ಲವನ್ನು ಸಂಯಮದಿಂದ ಎದುರಿಸಲು ಕಲಿಯಬೇಕು ಎಂದು ತಿಳಿಸಿದರು.

ಲಿಂಗದೇವಿ ಗುಬ್ಬಿ ಅವರು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ದೇಹದಾನ ಮಾಡುವುದಾಗಿ ವಾಗ್ದಾನ ಮಾಡಿದರು. ಪಾಲಿಕೆ ಸದಸ್ಯ ಎಸ್‌.ಟಿ. ವೀರೇಶ್‌, ಅಹಿಂದ ಪ್ರಜಾಶಕ್ತಿ ರಾಜ್ಯಾಧ್ಯಕ್ಷ ಗೋವಿಂದರಾಜು ಜೆ.ಎಂ. ಉಪಸ್ಥಿತರಿದ್ದರು.

ರುಕ್ಮಬಾಯಿ ವಚನ ಗಾಯನ, ಶಿವಬಸಯ್ಯ ಅವರಿಂದ ಭಕ್ತಿ ಗಾಯನ, ಬಸವ ಕಲಾಲೋಕದ ಸದಸ್ಯರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ರೋಷನ್‌ ಸ್ವಾಗತಿಸಿದರು. ಫಾರೂಕ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.