ದಾವಣಗೆರೆ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ಪರವಾನಗಿ ಪಡೆಯದೇ ಅನಧಿಕೃತವಾಗಿ ಕಾರ್ಯನಿರ್ವಹಿಸಿದ ಕೇಶ ಕಸಿ ಮತ್ತು ಚರ್ಮ ಕ್ಲಿನಿಕ್ಗಳ ವಿರುದ್ಧ ಪ್ರಕರಣ ದಾಖಲಿಸಿ ತಲಾ ₹ 1 ಲಕ್ಷ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೆ.4ರಂದು ನಗರದ ವಿವಿಧೆಡೆ ದಾಳಿ ನಡೆಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಅನಧಿಕೃತವಾಗಿದ್ದ ಕೇಶ ಕ್ಲಿನಿಕ್ಗಳ ಬಾಗಿಲು ಮುಚ್ಚಿಸಿದ್ದರು.
‘ಪರವಾನಗಿ ಪಡೆಯದೇ ಚಿಕಿತ್ಸಾ ಕೇಂದ್ರಗಳನ್ನು ತೆರೆದಿದ್ದು ಕಾನೂನು ಬಾಹಿರ. ಚಿಕಿತ್ಸಾ ಕೇಂದ್ರಗಳ ನಾಮಫಲಕಗಳನ್ನು ತೆರವುಗೊಳಿಸಿ ದಂಡ ವಿಧಿಸಿ. ಇದು ಪುನರಾವರ್ತನೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
‘15 ಕೇಶ ಕಸಿ ಕ್ಲಿನಿಕ್ಗಳಲ್ಲಿ ಚರ್ಮ ಚಿಕಿತ್ಸೆಯನ್ನೂ ನೀಡಲಾಗುತ್ತಿತ್ತು. ಇಂತಹ ಕೇಂದ್ರಗಳಿಗೆ 15 ತಂಡಗಳು ಏಕಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿವೆ. ರಾಮ್ ಅಂಡ್ ಕೋ ವೃತ್ತದ ಬಳಿಯ ವಿ-ಕೇರ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್, ಶಾಮನೂರು ರಸ್ತೆಯ ಹೇರ್ ಓ ಕ್ರಾಪ್ಟ್, ಯಲ್ಲಮ್ಮ ನಗರದ ಕಾಸ್ಮೋ ಅಸ್ತೇಟಿಕ್ ಅಂಡ್ ಸ್ಕಿನ್ ಕೇರ್ ಕ್ಲಿನಿಕ್ಗಳು ಕೆಪಿಎಂಇ ಕಾಯ್ದೆಯಡಿ ಅನುಮತಿ ಪಡೆದಿಲ್ಲ. ಈ ಕೇಂದ್ರಗಳನ್ನು ಮುಚ್ಚಿಸಿ, ಪ್ರಕರಣ ದಾಖಲಿಸಲಾಗಿದೆ. ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್. ಷಣ್ಮುಖಪ್ಪ ಸಭೆಗೆ ಮಾಹಿತಿ ನೀಡಿದರು.
‘ಎಂಸಿಸಿ ‘ಎ’ ಬ್ಲಾಕ್ನ ಇಶಾ ಹೇರ್ ಅಂಡ್ ಸ್ಕಿನ್ ಕ್ಲಿನಿಕ್, ‘ಬಿ’ ಬ್ಲಾಕ್ನಲ್ಲಿರುವ ಲಾ ಪೇಟಲ್ಸ್ ಅಸ್ತೆಟಿಕ್ ಕ್ಲಿನಿಕ್, ರಾಂ ಅಂಡ್ ಕೋ ವೃತ್ತದ ಓಂ ಡೆಂಟಲ್ ಕೇರ್, ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ರಿಧಿ ದಂತ ಚಿಕಿತ್ಸಾಲಯ ಮತ್ತು ಗ್ಲೋ ಡೆಂಟಲ್ ಅಂಡ್ ಫೇಶಿಯಲ್ ಅಸ್ತೆಟಿಕ್ ಕೇಂದ್ರಗಳು ದಂತ ಚಿಕಿತ್ಸೆಗಾಗಿ ಪರವಾನಗಿ ಪಡೆದಿವೆ. ಇಲ್ಲಿ ಚರ್ಮ ಚಿಕಿತ್ಸೆಯೂ ಸಿಗುತ್ತಿದೆ. ಈ ತಪ್ಪು ಪುನರಾವರ್ತನೆ ಆಗದಂತೆ ಎಚ್ಚರಿಕೆ ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.