ಹರಿಹರ: ಕಾಳಿದಾಸ ನಗರದಲ್ಲಿ ಬಾಲಕನೊಬ್ಬ ಬೊಲೆರೊ ಜೀಪ್ ಚಾಲನೆ ಮಾಡಿದ ಪ್ರಕರಣದಲ್ಲಿ ಜೀಪ್ ಮಾಲೀಕ, ಧಾರವಾಡ ಜಿಲ್ಲೆಯ ರಾಮಚಂದ್ರ ಮಟ್ಟಿ ಎಂಬವರಿಗೆ ಇಲ್ಲಿನ 1ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ₹25,000 ದಂಡ ವಿಧಿಸಿ ಆದೇಶಿಸಿದೆ.
ಆ.3 ರಂದು ನಗರ ಪೊಲೀಸ್ ಠಾಣ್ ಇನ್ಸ್ಪೆಕ್ಟರ್ ಆರ್.ಎಫ್.ದೇಸಾಯಿ ಗಸ್ತಿನಲ್ಲಿದ್ದಾಗ ಜೀಪೊಂದನ್ನು ತಡೆದು ವಿಚಾರಿಸಿದ್ದರು. ಚಾಲನೆ ಮಾಡುತ್ತಿದ್ದುದು ಬಾಲಕ ಎಂಬುದು ದೃಢಪಟ್ಟಿತ್ತು. ಈ ಕುರಿತು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆ. 6ರಂದು ಆದೇಶ ನೀಡಿದೆ.
ಬೈಕ್, ಕಾರು ಸೇರಿದಂತೆ ಯಾವುದೇ ವಾಹನವನ್ನು 18 ವರ್ಷದ ಒಳಗಿನವರಿಗೆ ಹಾಗೂ ಚಾಲನಾ ಪರವಾನಿಗೆ ಇಲ್ಲದವರಿಗೆ ನೀಡಬಾರದು. ಅಪ್ರಾಪ್ತ ವಯಸ್ಸಿನವರಿಗೆ ಚಾಲನೆ ಮಾಡಲು ವಾಹನ ನೀಡುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.