
ಕಡರನಾಯ್ಕನಹಳ್ಳಿ: ಉದ್ಯೋಗ ಖಾತ್ರಿಯಂತಹ ಯೋಜನೆಗಳು ಗ್ರಾಮೀಣ ಜನರ ಆಶಾ ಸಂಜೀವಿನಿ ಆಗಿವೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.
ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಉಕ್ಕಡಗಾತ್ರಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಪ್ರತ್ಯೇಕ ಗ್ರಾಮ ಪಂಚಾಯಿತಿ ರಚನೆಯಾಯಿತು. ಇದಾದ ಹತ್ತು ವರ್ಷಗಳ ನಂತರ ₹38 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ ಎಂದರು.
ಪಾರದರ್ಶಕ ಆಡಳಿತದಿಂದ ಮಾತ್ರ ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತವೆ. ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ಮೂಲಸೌಕರ್ಯಗಳಾದ ಆಹಾರ, ಆರೋಗ್ಯ, ಶಿಕ್ಷಣ ಗ್ರಾಮೀಣ ಜನತೆಗೆ ಸಿಗುವಂತಾಗಬೇಕು. ಗ್ರಾಮ ಪಂಚಾಯಿತಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಜನ ಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಗ್ರಾಮ ಪಂಚಾಯಿತಿಯವರು ಮುಂದಾಗಬೇಕು ಎಂದು ತಿಳಿಸಿದರು.
ಉಕ್ಕಡಗಾತ್ರಿಯು ಜಿಲ್ಲೆಯ ಅಂಚಿನಲ್ಲಿರುವ ಪುಣ್ಯಕ್ಷೇತ್ರವಾಗಿದ್ದು, ರಾಜ್ಯ ಮತ್ತು ಹೊರರಾಜ್ಯದ ಯಾತ್ರಿಕರು ಬರುತ್ತಾರೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹೆಚ್ಚಿನ ಅನುದಾನ ನೀಡಬೇಕು ಎಂದು ಕರಿಬಸವೇಶ್ವರ ಟ್ರಸ್ಟ್ ಕಾರ್ಯದರ್ಶಿ ಎಸ್ ಸುರೇಶ್ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಸಿದ್ದಪ್ಪ ಕಟಿಗೇರ, ಉಪಾಧ್ಯಕ್ಷ ಜಿಗಳಿ ಚಂದ್ರಗೌಡ, ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಬಸವರಾಜಪ್ಪ, ಎ.ಡಿ. ಜಿ.ಸುನೀಲ್ ಕುಮಾರ್, ಪಿಡಿಒ ಟಿ.ಪಿ. ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಗೀತಾ ರಡ್ಡೇರ, ಶಂಕರಪ್ಪ ಕಮದೋಡ, ಹೇಮಪ್ಪ ಶಿವಣ್ಣರ, ಸಾಕಮ್ಮ, ಡಿ.ಜಿ. ಕೆಂಚವೀರಯ್ಯ, ಗೌರಮ್ಮ, ಕರಿಬಸಮ್ಮ, ಪ್ರಕಾಶ್ ಕುಮಾರ್, ರವಿ ಗೌಡ ಮತ್ತು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.