ADVERTISEMENT

ಹನುಮನಹಳ್ಳಿ: ಜ್ವರ, ಕಾಲು ಬಾವು ಕಾಯಿಲೆ ರೋಗ ಯಕ್ಷ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 15:52 IST
Last Updated 2 ಜೂನ್ 2023, 15:52 IST

ಸಾಸ್ವೆಹಳ್ಳಿ: ಸಮೀಪದ ಹನುಮನಹಳ್ಳಿ ಗ್ರಾಮದಲ್ಲಿ ಏಪ್ರಿಲ್ ತಿಂಗಳಿಂದ ಗ್ರಾಮದ ಒಂದು ಕೇರಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಜ್ವರ ಪ್ರಕರಣಗಳು ಎರಡು ದಿನಗಳಿಂದ ಕಡಿಮೆಯಾಗಿವೆ.

ಆದರೆ, ಕೆಲವರಲ್ಲಿ ಕೈ ಕಾಲು ಊತ, ಮುಖದಲ್ಲಿ ಬಾವು, ಬಾಯಿ ಕಪ್ಪಾಗುವುದು ಮುಂದುವರಿದಿದೆ.

ಆರೋಗ್ಯ ಇಲಾಖೆಯು 2 ತಿಂಗಳ ಹಿಂದೆ ಗ್ರಾಮದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆಸಿತು. ಮೇ ತಿಂಗಳ ಮೂರನೇ ವಾರದಿಂದ ಮತ್ತೆ ಕಾಯಿಲೆ ಉಲ್ಬಣಗೊಳ್ಳತೊಡಗಿತು. ಆರೋಗ್ಯ ಇಲಾಖೆಯವರು ಚಿಕೂನ್ ಗುನ್ಯಾ ಇರಬಹುದು ಎಂದು ಶಂಕಿಸಿ ಚಿಕಿತ್ಸೆ ನೀಡಿದರು. 

ADVERTISEMENT

ಆರೋಗ್ಯ ಇಲಾಖೆಯು ಸತತ ವಾರದಿಂದ ಜನರಲ್ಲಿ ಜಾಗೃತಿ ಮೂಡಿಸಿ, ಸ್ವಚ್ಛತೆಗೆ ಆದ್ಯತೆ ನೀಡಿದೆ. ಹೀಗಾಗಿ ಎರಡು ಮೂರು ದಿನಗಳಿಂದ ಕಾಯಿಲೆ ಕಾಣಿಸಿಕೊಂಡಿಲ್ಲ.

ಗ್ರಾಮದ ಶೇ 60 ಜನರಿಗೆ ಈ ಕಾಯಿಲೆ ಬಂದು ಹೋಗಿದೆ. ಈಗಲೂ ಹಲವರ ಕಾಲು, ಮುಖ, ಕೈ ಬಾವು ಕಡಿಮೆಯಾಗಿಲ್ಲ. ಅಗಾಗ್ಗೆ ನೋವು ಕಾಣಿಸಿಕೊಳ್ಳುವುವುರಿಂದ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

‘ರಕ್ತ ಪರೀಕ್ಷೆಯಲ್ಲಿ ಡೆಂಗಿ ಹಾಗೂ ಚಿಕೂನ್‌ ಗುನ್ಯಾ ನೆಗಟಿವ್ ವರದಿ ಬಂದಿದೆ. ಈ ಕಾಯಿಲೆಯ ಮೂಲ ಹಾಗೂ ಹರಡುವ ವಿಧಾನ ಯಕ್ಷ ಪ್ರಶ್ನೆಯಾಗಿದೆ. ಈಗ ಗ್ರಾಮದಲ್ಲಿ ಹೊಸ ಪ್ರಕರಣ ಕಂಡು ಬರುತ್ತಿಲ್ಲ. ಹೆಚ್ಚಿನ ತನಿಖೆ ಹಾಗೂ ಪರೀಕ್ಷೆಗೆ ಜಿಲ್ಲಾ ಹಾಗೂ ರಾಜ್ಯ ಹಂತಕ್ಕೆ ಮಾಹಿತಿ ಕಳುಹಿಸಲಾಗುವುದು’ ಎಂದು ಹೊನ್ನಾಳಿ ತಾಲ್ಲೂಕು ವೈದ್ಯಾಧಿಕಾರಿ ಕೆಂಚಪ್ಪ ಬಂತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.