ಹೊನ್ನಾಳಿ: ರೈತರು ತಮ್ಮ ಅಳಿದುಳಿದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಕೃಷಿ ಮಾರುಕಟ್ಟೆ ಪ್ರಾರಂಭಿಸಬೇಕು ಎಂದು ಹಸಿರು ಸೇನೆಯ ರಾಜ್ಯಾ ಘಟಕದ ಅಧ್ಯಕ್ಷ ಕರಿಬಸಪ್ಪ ಗೌಡ ಮಾಚೇನಹಳ್ಳಿ ಹೇಳಿದರು.
ಹೊನ್ನಾಳಿಯಲ್ಲಿ ಅ.29 ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ಆರಂಭದಲ್ಲಿ ಹೆಚ್ಚಾದ ಮಳೆಯಿಂದಾಗಿ ಸರಿಯಾಗಿ ಬಿತ್ತನೆ ಮಾಡಲಾಗಲಿಲ್ಲ, ಇನ್ನೊಂದು ಕಡೆ ಬಿತ್ತನೆ ಮಾಡಿದ ಬೆಳೆಗೆ ಮಳೆಯ ಕಾಟ, ಇದೀಗ ಉಳಿದ ಬೆಳೆಯ ಫಸಲನ್ನು ಉಳಿಸಿಕೊಳ್ಳೋಣ ಎಂದರೆ ಮತ್ತೆ ಮಳೆಯ ಕಾಟ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಳೆಯಿಂದಾಗಿ ಹಾಳಾದ ಬೆಳೆಗಳನ್ನು ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೇ ನಡೆಸಬೇಕು, ಬೆಳೆ ನಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಪರಿಹಾರ ಕೊಡಿಸಬೇಕು ಎಂದು ಕರಿಬಸಪ್ಪ ಗೌಡ ಆಗ್ರಹಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಸಾಕಷ್ಟು ಕೆರೆಗಳಿದ್ದು, ಅವುಗಳ ಹೂಳೆತ್ತಬೇಕು, ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂಬ ರೈತರ ಹಲವು ಬೇಡಿಕೆಗಳನ್ನಿಟ್ಟುಕೊಂಡು ಅ. 29 ರಂದು ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ. ಬಸಪ್ಪ ಅರಬಗಟ್ಟೆ ಮಾತನಾಡಿ, ಮೆಕ್ಕೆ ಜೋಳ, ಭತ್ತ, ಹತ್ತಿ, ಈರುಳ್ಳಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು, ಹಾಗೂ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದರು.
ರೈತರು ಟಿ.ಸಿ. ತೆಗೆದುಕೊಳ್ಳಬೇಕಾದರೆ ₹ 2 ಲಕ್ಷದವರೆಗೂ ಖರ್ಚು ಮಾಡಬೇಕಾದ ದುಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಈ ಹಿಂದೆ ಕೇವಲ ಹತ್ತಿಪ್ಪತ್ತು ಸಾವಿರ ಖರ್ಚು ಮಾಡಿ ಟಿ.ಸಿ ಪಡೆಯಬಹುದಿತ್ತು. ನೂತನ ನಿಯಮವನ್ನು ರದ್ದುಪಡಿಸಿ ಈ ಹಿಂದಿನಂತೆ ನಿಯಮವನ್ನು ಮುಂದುವರೆಸಿಕೊಂಡು ಹೋಗಲು ಅನುಕೂಲ ಮಾಡಿಕೊಡಬೇಕು ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ಬೆಳಗುತ್ತಿ ಹೇಳಿದರು
ಅ. 29 ರಂದು ಬೆಳಿಗ್ಗೆ 10 ಗಂಟೆಗೆ ಅವಳಿ ತಾಲ್ಲೂಕಿನ ರೈತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಬಸವರಾಜಪ್ಪ ಬಣಕಾರ, ಗೌರವಾಧ್ಯಕ್ಷ ಜಿ. ವೀರಪ್ಪ ಸೊರಟೂರು, ಮಾಜಿ ಸೈನಿಕ ರಮೇಶ್ ಹಿರೇಮಠ ಸೇರಿದಂತೆ ರೈತರು ಉಪಸ್ಥಿತರಿದ್ದರು.