ಹೊನ್ನಾಳಿ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ಪ್ರಸಕ್ತ ಸಾಲಿಗೆ ₹ 44.01 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಕೆ.ಜಿ. ರಮೇಶ್ ಹೇಳಿದರು.
ಪಟ್ಟಣದ ಹಿರೇಕಲ್ಮಠದ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ನಡೆದ ಬ್ಯಾಂಕ್ನ 87ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ನಮ್ಮ ಬ್ಯಾಂಕ್ ತನ್ನ ಲಾಭಾಂಶದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ಇದಕ್ಕೆ ಬ್ಯಾಂಕ್ನ ಎಲ್ಲಾ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಸಹಕಾರ ಕಾರಣ ಎಂದರು.
ಹೊನ್ನಾಳಿ ಪಟ್ಟಣದಲ್ಲಿ 1938ರಲ್ಲಿ ಸ್ಥಾಪನೆಗೊಂಡ ಪಿಎಲ್ಡಿ ಬ್ಯಾಂಕ್, ತನ್ನ ಅನೇಕ ಏಳು ಬೀಳುಗಳ ನಡುವೆ ರೈತರಿಗೆ ಸಾಲಸೌಲಭ್ಯವನ್ನು ಒದಗಿಸಿಕೊಡುವ ಕೆಲಸ ಮಾಡಿದೆ. ನಮ್ಮ ಬ್ಯಾಂಕಿನ ಕಾರ್ಯವ್ಯಾಪ್ತಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕನ್ನು ಹೊಂದಿದೆ. ಒಟ್ಟು 6,123 ಸದಸ್ಯರನ್ನು ಹೊಂದಿದೆ ಎಂದರು.
ಜಿಲ್ಲಾ ಸಹಕಾರಿ ಬ್ಯಾಂಕ್ನ ವ್ಯವಸ್ಥಾಪಕಿ ಶ್ವೇತಾ, ಹೊನ್ನಾಳಿಯ ಈ ಬ್ಯಾಂಕ್ ಜಿಲ್ಲೆಯಲ್ಲಿ ಮೂರನೇ ಸ್ಥಾನ, ರಾಜ್ಯದಲ್ಲಿ 43ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಅತ್ಯುತ್ತಮ ಬ್ಯಾಂಕ್ ಆಗಿ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಬ್ಯಾಂಕ್ನ ನಿರ್ದೇಶಕ ರಾಘವೇಂದ್ರ ಅನುಪಾಲನಾ ವರದಿ ಮಂಡಿಸಿದರು. ನಿರ್ದೇಶಕ ಕೆ.ವಿ. ನಾಗರಾಜ್ ಲೆಕ್ಕ ಪರಿಶೋಧಕರ ಆಯ್ಕೆ ವಿಷಯ ಮಂಡಿಸಿದರು. ನಿರ್ದೇಶಕ ಎಂ.ಜಿ.ಆರ್. ಮಂಜುನಾಥ್ ಮಾತನಾಡಿದರು. ಬ್ಯಾಂಕ್ನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಬ್ಯಾಂಕ್ನ ಉಪಾಧ್ಯಕ್ಷೆ ರುದ್ರಮ್ಮ ಹೊಟ್ಯಾಪುರ, ನಿರ್ದೇಶಕರಾದ ಜಿ. ಶಂಕರಪ್ಪ, ಸಿ.ಎಚ್.ಸಿದ್ದಪ್ಪ, ಎಸ್.ಕುಬೇರನಾಯ್ಕ, ಕೆ. ಚೇತನ್, ಎಚ್.ಡಿ. ಸುನೀಲ್ಕುಮಾರ್, ಅನಸೂಯಮ್ಮ, ಆಶಾ, ಹೊನ್ನಾಳಿ ಪಿಕಾರ್ಡ್ ಬ್ಯಾಂಕ್ನ ವ್ಯವಸ್ಥಾಪಕ ಸಿ.ಎನ್. ವಿಶಾಲಾಕ್ಷಿ ಹಾಗೂ ಸಿಬ್ಬಂದಿ ಹಾಗೂ ರೈತ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.