ಸಂತೇಬೆನ್ನೂರು: ‘ದಂತ ವೈದ್ಯೆ ಹಾಗೂ ಜನಸೇವೆ ಬಗ್ಗೆ ಸಾಕಷ್ಟು ಜ್ಞಾನ ಇತ್ತು. ಅನುಭವಿ ರಾಜಕಾರಣಿ ಅಲ್ಲದಿದ್ದರೂ ಸಂಸತ್ತಿನ ನಿರಂತರ ವಿಫುಲ ಜ್ಞಾನ ಗಳಿಸುವ ವಿದ್ಯಾರ್ಥಿನಿ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ಎಸ್ಎಸ್ಜೆವಿಪಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಗುರುವಾರ ಪ್ರಾಥಮಿಕ ವಿಭಾಗದ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಸಂವಿಧಾನದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಅರಿವು, 12ರಿಂದ 15 ಸಚಿವಾಲಯಗಳ ಬಗ್ಗೆ ತಿಳಿವಳಿಕೆ. ಉಚಿತ ಯೋಜನೆಗಳ ಮಾಹಿತಿ. ವಿದ್ಯಾರ್ಥಿಗಳು, ರೈತರು ಹಾಗೂ ಮಹಿಳೆಯರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಮಕ್ಕಳು ಕೂಡ ನಿರಂತರ ಕಲಿಕೆ ಆಸಕ್ತಿ ಹೊಂದಬೇಕು. ಪಠ್ಯೇತರ ಚಟುವಟಿಕೆ, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಶಿಕ್ಷಕರು ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.
‘ಸುಮಾರು 1,238 ವಿದ್ಯಾರ್ಥಿಗಳ ಕೆಪಿಎಸ್ ಬೃಹತ್ ಶಾಲಾ ಸಂಕೀರ್ಣ, ಕುಡಿಯುವ ನೀರು, ಶೌಚಾಲಯ, ಕೊಠಡಿಗಳ ಕೊರತೆಗೆ ಸಂಸದ ಹಾಗೂ ಶಾಸಕರ ಅನುದಾನದಲ್ಲಿ ಆರು ತಿಂಗಳಲ್ಲಿ ಪರಿಹಾರ ನೀಡಲಾಗುವುದು. ಜನಪ್ರತಿನಿಧಿಗಳು, ಶಾಲಾ ಸಿಬ್ಬಂದಿ ಕಾಮಗಾರಿಗಳಿಗೆ ಅಗತ್ಯ ಹಣಕಾಸು ವರದಿಯನ್ನು ಶೀಘ್ರ ತಲುಪಿಸಿ’ ಎಂದು ಸೂಚಿಸಿದರು.
ಗ್ರಾ.ಪಂ. ಅಧ್ಯಕ್ಷೆ ರೇಣುಕಮ್ಮ ಕೃಷ್ಣಮೂರ್ತಿ, ಬಿಇಒ ಎಲ್. ಜಯಪ್ಪ, ಪ್ರಾಂಶುಪಾಲರಾದ ಶಾರದಮ್ಮ, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ದಿಶಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ, ಚಂದನ, ಗ್ರಾ.ಪಂ. ಸದಸ್ಯ ಆಸೀಫ್, ಕೆ.ವಿ.ಬಾಲಚಂದರ್, ಎಸ್ಡಿಎಂಸಿ ಉಪಾಧ್ಯಕ್ಷ ನಯಾಜ್, ಡಿ.ಬಿ.ಕಿರಣ್ ಕುಮಾರ್, ಮುಖ್ಯಶಿಕ್ಷಕ ರವಿ, ಪಾಪಯ್ಯ, ಎಂ.ಬಿ.ನಾಗರಾಜ್, ಜಬ್ಬಾರ್, ಜಿ.ಎಸ್.ಶಿವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.