ದಾವಣಗೆರೆ: ‘ನಾಲ್ಕು ದಶಕಗಳಿಂದ ಹಿಂದುಳಿದ ವರ್ಗಗಳ ಸೇವೆ ಮಾಡುತ್ತಾ ಬಂದಿದ್ದ ಮಾಜಿ ಸಚಿವ ದಿ. ಎ.ಕೃಷ್ಣಪ್ಪ ಅವರ ಪುತ್ರಿ, ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಗೊಲ್ಲ ಸಮಾಜವು ಬಿಜೆಪಿಯಿಂದ ದೂರ ಉಳಿಯಬೇಕಾದೀತು’ ಎಂದು ಚಿತ್ರದುರ್ಗದ ಯಾದವ ಗುರುಪೀಠದ ಪೀಠಾಧಿಪತಿ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾದವ ಸಮುದಾಯಕ್ಕೆ ಎರಡು ಟಿಕೆಟ್ ನೀಡಿದ್ದರು. ಬೇರೆ ಪಕ್ಷಗಳು ನೀಡಿರಲಿಲ್ಲ. ರಾಜಕೀಯ ಶಕ್ತಿ ನೀಡಿದ್ದಾರೆ ಎಂದು ರಾಜ್ಯದಲ್ಲಿರುವ ಯಾದವ ಸಮುದಾಯದ 40 ಲಕ್ಷ ಜನ ಬೆಂಬಲ ನೀಡಿದ್ದರು. ಇನ್ನೂ ನೀಡುತ್ತಾರೆ ಎಂಬ ನಿರೀಕ್ಷೆ ಇದೆ. ಈ ಸಮುದಾಯ ಕಾಂಗ್ರೆಸ್, ಜೆಡಿಎಸ್ ಜತೆ ಇತ್ತು. ಪೂರ್ಣಿಮಾ ಬಿಜೆಪಿಗೆ ಬಂದ ಮೇಲೆ ಸಮುದಾಯವೂ ಬಂದಿದೆ. ಸಚಿವ ಸ್ಥಾನ ನೀಡದೇ ಇದ್ದರೆ ಅದು ಬಿಜೆಪಿಗೆ ಹೊಡೆತ’ ಎಂದು ತಿಳಿಸಿದರು.
ಇದು ಸಮ್ಮಿಶ್ರ ಸರ್ಕಾರ: ಭೋವಿ ಶ್ರೀ
‘ಪಕ್ಷಾಂತರಿಗಳು ಮತ್ತು ಬಿಜೆಪಿ ಸೇರಿ ಮಾಡಿರುವ ಸಮ್ಮಿಶ್ರ ಸರ್ಕಾರ ಇದು. ದೊಡ್ಡ ಸಮುದಾಯಗಳನ್ನು ಓಲೈಕೆ ಮಾಡುತ್ತಾ ಸಣ್ಣ ಸಮಾಜಗಳನ್ನು ಕಡೆಗಣನೆ ಮಾಡಲಾಗಿದೆ’ ಎಂದು ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಟೀಕಿಸಿದರು.
‘ಸರ್ವವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಸರ್ಕಾರ ಕಾರ್ಯನಿರ್ವಹಿಸಬೇಕಿತ್ತು. ಸಚಿವ ಸಂಪುಟ ಅನುಭವ ಮಂಟಪದ ರೀತಿ ಇರಬೇಕಿತ್ತು. ಎಲ್ಲ ಜಾತಿ–ಜನಾಂಗದವರಿಗೂ ಆದ್ಯತೆ ನೀಡಬೇಕಿತ್ತು. ಭೋವಿ ಸಮಾಜದ ಒಬ್ಬ ಶಾಸಕರನ್ನಾದರೂ ಸಚಿವರನ್ನಾಗಿ ಮಾಡಬೇಕಿತ್ತು. ಉಳಿದ ಸಮಾಜಗಳಿಗೂ ಪ್ರಾತಿನಿಧ್ಯ ನೀಡಬೇಕಿತ್ತು. ಸಂಪುಟದಲ್ಲಿ ಸಾಮಾಜಿಕ ನ್ಯಾಯ ನೀಡದ ಸರ್ಕಾರದಿಂದ ಸಮಾಜದ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸೋಕೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.