ADVERTISEMENT

ಅಕ್ರಮ ಸಾಗಾಟ: ₹ 1.5 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 13:06 IST
Last Updated 29 ಜೂನ್ 2020, 13:06 IST
ಅಕ್ರಮ ಪಡಿತರ ಸಾಗಾಣಿಕೆ (ಸಾಂದರ್ಭಿಕ ಚಿತ್ರ)
ಅಕ್ರಮ ಪಡಿತರ ಸಾಗಾಣಿಕೆ (ಸಾಂದರ್ಭಿಕ ಚಿತ್ರ)   

ದಾವಣಗೆರೆ: ರಾಣೆಬೆನ್ನೂರು ಕಡೆಯಿಂದ ದಾವಣಗೆರೆ ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ 50 ಕೆ.ಜಿ. ತೂಕದ 200 ಚೀಲ ಅಕ್ಕಿ ಪತ್ತೆಯಾಗಿದೆ.

ರಾಣೆಬೆನ್ನೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಗುರಣ್ಣ ಎಂಬ ವ್ಯಕ್ತಿ ಜನರಿಂದ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕಳುಹಿಸಿಕೊಟ್ಟಿರುವುದಾಗಿ ಲಾರಿ ಚಾಲಕ ಶಿಕಾರಿಪುರ ತಾಲ್ಲೂಕಿನ ಮಂಜನಾಯ್ಕ ವಿಚಾರಣೆ ವೇಳೆ ತಿಳಿಸಿದ್ದಾರೆ.

ಸಿಪಿಐ ಮಂಜುನಾಥ, ಎಎಸ್‌ಐ ಜೋವಿತ್‌ರಾಜ್‌ ಮತ್ತು ಸಿಬ್ಬಂದಿ ಹೈವೆ ಗಸ್ತು ವಾಹನದಲ್ಲಿ ವಾಹನ ತಪಾಸಣೆ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಂಜೀವ್‌ ಕುಮಾರ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ. ₹ 1.5 ಲಕ್ಷ ಮೌಲ್ಯದ ಅಕ್ಕಿ, ₹ 4 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ.

ADVERTISEMENT

ಮರಳು ಸಾಗಾಟ: ವಶ

ದಾವಣಗೆರೆ: ಪರವಾನಗಿ ಇಲ್ಲದೇ ಟಿಪ್ಪರ್‌ನಲ್ಲಿ ಮರಳು ಸಾಗಾಟ ಮಾಡುತ್ತಿರುವುದನ್ನು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಿಪಿಐ ಮಂಜುನಾಥ ಅವರಿಗೆ ಈ ಬಗ್ಗೆ ಮಾಹಿತಿ ಬಂದಿದ್ದರಿಂದ ಹಳೇಬಾತಿ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ವಾಹನ ತಪಾಸಣೆ ಮಾಡುವ ವೇಳೆ ಟಿಪ್ಪರ್‌ ಬಂದಿದೆ. ನಿಲ್ಲಿಸಲು ಸೂಚನೆ ನೀಡಿದಾಗ ಟಿಪ್ಪರ್‌ ಚಾಲನೆಯಲ್ಲಿ ಇರುವಾಗಲೇ ಚಾಲಕ ಟಿಪ್ಪರ್‌ ಲಾರಿಯಿಂದ ಹಾರಿ ಪರಾರಿಯಾಗಿದ್ದಾನೆ.

ಮರಳು ಎಂಬುದು ಗೊತ್ತಾಗಬಾರದು ಎಂದು ಯಾವುದೋ ಬಿಳಿ ಪೌಡರ್‌ಅನ್ನು ಮೇಲೆ ಸುರಿದಿರುವುದು ಕಂಡು ಬಂದಿದೆ. ₹ 30 ಸಾವಿರ ಮೌಲ್ಯದ ಮರಳು, ₹ 5 ಲಕ್ಷ ಮೌಲ್ಯದ ಲಾರಿ ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಂಜೀವ್‌ ಕುಮಾರ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.