ADVERTISEMENT

ಅಂತರಾಷ್ಟ್ರೀಯ ಕುಸ್ತಿಪಟು ರಫೀಕ್ ಹೋಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:24 IST
Last Updated 26 ಫೆಬ್ರುವರಿ 2021, 2:24 IST
ಅಂತರಾಷ್ಟ್ರೀಯ ಕುಸ್ತಿಪಟು ರಫೀಕ್ ಹೋಳಿ ಅವರನ್ನು ದಾವಣಗೆರೆಯ ಕುಸ್ತಿ ತರಬೇತುದಾರ ಶಿವಾನಂದ ಮತ್ತು ಗಣ್ಯರು ಸನ್ಮಾನಿಸಿದರು
ಅಂತರಾಷ್ಟ್ರೀಯ ಕುಸ್ತಿಪಟು ರಫೀಕ್ ಹೋಳಿ ಅವರನ್ನು ದಾವಣಗೆರೆಯ ಕುಸ್ತಿ ತರಬೇತುದಾರ ಶಿವಾನಂದ ಮತ್ತು ಗಣ್ಯರು ಸನ್ಮಾನಿಸಿದರು   

ದಾವಣಗೆರೆ: ಜಲಂಧರ್‌ನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿರುವ ಅಂತರರಾಷ್ಟ್ರೀಯ ಕುಸ್ತಿಪಟು ರಫೀಕ್‌ ಹೋಳಿ ಅವರನ್ನು ಆಂಜನೇಯ ಬಡಾವಣೆಯಲ್ಲಿರುವ ಕುಸ್ತಿ ಅಂಗಣದಲ್ಲಿ ಗುರುವಾರ ಸನ್ಮಾನಿಸಲಾಯಿತು.

ದಾವಣಗೆರೆ ಕ್ರೀಡಾನಿಲಯದ ಕುಸ್ತಿಪಟುಗಳು, ಕೆಎಸ್‌ಪಿ ಕುಸ್ತಿ ತಂಡ ಹಾಗೂ ಜಿ್ಲಾ ಕುಸ್ತಿ ಸಂಘದಿಂದ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಾಜಿ ಕುಸ್ತಿ ಪಟು ಶ್ರೀನಿವಾಸ ದಾಸ್‌ ಕರಿಯಪ್ಪ ಮಾತನಾಡಿ, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ರಫೀಕ್‌ ಹೋಳಿ ಹೋಳಿ ಮತ್ತು ಅರ್ಜುನ ಹಲ್ಲುಕುರ್ಕಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ. ಅವರಿಬ್ಬರಿಗೂ ಅವಕಾಶ ಸಿಗಲಿ. ಇಂದು ಅರ್ಜುನ್‌ ಅವರು ಆ ತಯಾರಿಯಿಂದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿಲ್ಲ. ರಫೀಕ್‌ ಹೋಳಿ ಬಂದಿದ್ದಾರೆ. ಇಬ್ಬರೂ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯಲಿ’ ಎಂದು ಹಾರೈಸಿದರು.

ADVERTISEMENT

ಕುಸ್ತಿ ಸಂಘದ ಕಾರ್ಯದರ್ಶಿ ಕೆ.ಎಂ. ವೀರೇಶ್‌, ‘ಇಬ್ಬರೂ ಆರೇಳು ವರ್ಷ ಇಲ್ಲೇ ತರಬೇತಿ ಪಡೆದಿದ್ದಾರೆ. ಹಿಂದಿನ ರಿಯೊ ಒಲಿಂಪಿಕ್ಸ್‌ನಲ್ಲಿಯೇ ಅವಕಾಶ ಸಿಗಬೇಕಿತ್ತು. ಮುಂದೆ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಅವಕಾಶ ಸಿಗಲಿ’ ಎಂದು ಹಾರೈಸಿದರು.

ತರಬೇತುದಾರ ಶಿವಾನಂದ್‌, ‘ಅರ್ಜುನ್‌ ಹಲ್ಲುಕುರ್ಕಿ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ, ಕಾಮನ್‌ವೆಲ್ತ್‌ನಲ್ಲಿ ರಫೀಕ್‌ ಹೋಳಿ ಬೆಳ್ಳಿ ಪದಕ ಪಡೆದಿರುವುದು ತರಬೇತುದಾರನಾಗಿ ನನಗೆ ಖುಷಿಯ ವಿಚಾರ. ಅವರಿಬ್ಬರಿಗೆ ಏಕಲವ್ಯ ಪ್ರಶಸ್ತಿ, ನನಗೆ ಜೀವಮಾನದ ಪ್ರಶಸ್ತಿ, ಆನಂದ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದಿರುವುದು ದಾವಣಗೆರೆ ಜಿಲ್ಲೆಗೆ ಹೆಮ್ಮೆಯ ವಿಚಾರ. ಅರ್ಜುನ್‌ ಮತ್ತು ರಫೀಕ್‌ ಮುಂದಿನ ಒಲಿಂಪಿಕ್ಸ್‌ನಲ್ಲಿ ಖಂಡಿತ ಪದಕ ಪಡೆದು ದೇಶಕ್ಕೆ ಹೆಮ್ಮೆ ತರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೈಟ್‌ ಲಿಫ್ಟಿಂಗ್‌ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ್, ಸ್ಟಾರ್‌ ವೀರಣ್ಣ, ಬಿ. ವೀರಣ್ಣ, ತರಬೇತುದಾರರಾದ ಕಾರ್ತಿಕ್‌ ಕಾಟೆ, ಮಲ್ಲಪ್ಪ ಪಾಟೀಲ್‌, ಪೊಲೀಸ್‌ ಇಲಾಖೆಯ ಶ್ರೀಶೈಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.