ಹರಿಹರ: ಸಾಮೂಹಿಕ ದಸರಾ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ನಡೆದ ವಿಜಯದಶಮಿ ದಸರಾ ಜಂಬೂ ಸವಾರಿ ಮೆರವಣಿಗೆ ಗಮನ ಸೆಳೆಯಿತು.
ಹರಿಹರೇಶ್ವರ ದೇವಸ್ಥಾನದಿಂದ ಆನೆ ಮೇಲೆ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಪುಷ್ಪಾರ್ಚಾನೆ ಮಾಡುವ ಮೂಲಕ ಚಾಲನೆ ನೀಡಿದರು.
ಹರಿಹರೇಶ್ವರ ಸ್ವಾಮಿಯ ಉತ್ಸವ ಮೂರ್ತಿ, ಲಕ್ಷ್ಮಿದೇವಿ, ದುರ್ಗಾದೇವಿ ಮೂರ್ತಿ, ವಿವಿಧ ಸಮಾಜಗಳ ದೇವತಾ ಮೂರ್ತಿಗಳೊಂದಿಗೆ ಸಾಂಸ್ಕೃತಿಕ ಕಲಾ ತಂಡಗಳು, ಪೌರಾಣಿಕ ವ್ಯಕ್ತಿಗಳ ಸ್ತಬ್ಧ ಚಿತ್ರ, ಜೋಡೆತ್ತು ಹಾಗೂ ಬಾಜಾ ಭಜಂತ್ರಿ, ಡೊಳ್ಳು ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಮಧ್ಯಾಹ್ನ 3.30ಕ್ಕೆ ಆರಂಭವಾದ ಮೆರವಣಿಗೆ ವಿವಿಧ ರಸ್ತೆ ಮೂಲಕ ಜೋಡು ಬಸವೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ನಾರಾಯಣ್ ಜೋಯಿಸ್, ಚಿದಂಬರ ಜೋಯಿಸ್ ಅವರ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳು ನಡೆದವು. ನಂತರ ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್ ಅಂಬುಛೇದನ ಮಾಡಿದರು.
ಮಧ್ಯಾಹ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರ ಬೈಕ್ ರ್ಯಾಲಿ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತಕ್ಕೆ ಯುವತಿಯರು ಹೆಜ್ಜೆ ಹಾಕಿದರು.
ನಗರಸಭಾಧ್ಯಕ್ಷೆ ಶಾಹೀನಾ ಬಾನು ದಾದಾಪೀರ್, ಪೌರಾಯುಕ್ತ ಐ. ಬಸವರಾಜ್, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಎಚ್.ಎಸ್. ಶಿವಶಂಕರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಮುಖಂಡರಾದ ಚಂದ್ರಶೇಖರ್ ಪೂಜಾರ್, ಅಜಿತ್ ಸಾವಂತ್, ಕಾಂಗ್ರೆಸ್ ಮುಖಂಡರಾದ ಎಂ.ನಾಗೇಂದ್ರಪ್ಪ, ನಂದಿಗಾವಿ ಶ್ರೀನಿವಾಸ್, ಕುಣಿಬೆಳಕೆರೆ ದೇವೇಂದ್ರಪ್ಪ, ಡಾ.ದೀಟೂರು ಮಹೇಶ್ವರಪ್ಪ, ಎ.ಗೋವಿಂದರೆಡ್ಡಿ, ಶಂಕರ್ ಖಟಾವ್ಕರ್ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.