
ದಾವಣಗೆರೆಯ ಸಿದ್ದಗಂಗಾ ಶಾಲೆಯ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆದ ‘ಒಂದು ಕಾಡಿನ ಕಥೆ’ ನಾಟಕ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಮನೋಜ್ಞವಾಗಿ ಅಭಿನಯಿಸಿದರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆ: ರಂಗಭೂಮಿ ಸದಾ ಹರಿಯುತ್ತಿರುವ ನದಿ. ಇದಕ್ಕೆ ಹಲವು ತೊರೆಗಳು ನಿರಂತರವಾಗಿ ಸೇರುತ್ತಿದ್ದು, ಕನ್ನಡ ರಂಗಭೂಮಿ ವಿಶ್ವಕ್ಕೆ ತೆರೆದುಕೊಳ್ಳುತ್ತಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯ ರವೀಂದ್ರ ಸಿರಿವರ ಅಭಿಪ್ರಾಯಪಟ್ಟರು.
ಇಲ್ಲಿನ ಸಿದ್ಧಗಂಗಾ ವಿದ್ಯಾಸಂಸ್ಥೆಯ ಬಯಲು ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡ ಅಕಾಡೆಮಿ ಕಾರ್ಯಚಟುವಟಿಕೆ ಪುನರಾರಂಭಗೊಳ್ಳಲು ಹೆಚ್ಚು ಸಮಯ ಹಿಡಿಯಿತು. ರಂಗಭೂಮಿಯನ್ನು ಜನರ ನಡುವೆ ಕೊಂಡೊಯ್ಯಲು ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಸಾಮಾಜಿಕ, ಪೌರಾಣಿಕ ನಾಟಕ ರಚನೆ, ಅಭಿನಯ ಶಿಬಿರ ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.
‘ರಂಗಭೂಮಿಗೆ ದಾವಣಗೆರೆ ಮತ್ತೆ ತೆರೆದುಕೊಳ್ಳುತ್ತಿದೆ. ಇತ್ತೀಚೆಗೆ ರಂಗ ಚಟುವಟಿಕೆ ಪುಟಿದೇಳುತ್ತಿರುವುದು ನಿಜಕ್ಕೂ ಖುಷಿಪಡುವ ಸಂಗತಿ. ಮಕ್ಕಳಿಗೆ ಹಣಕ್ಕಿಂತ ಮಾನವೀಯತೆ ಬೆಳೆಸಬೇಕು. ಮಕ್ಕಳಿಗೆ ಕಲೆ ಮತ್ತು ರಂಗಚಟುವಟಿಕೆ ಕಲಿಸುವ ಪಾಠ ದೊಡ್ಡದು. ಅಂಕಗಳ ಹಿಂದೆ ಓಡುವ ಬದಲು ರಂಗಭೂಮಿ ಕಡೆಗೆ ಒಲವು ಬೆಳೆಸಿಕೊಳ್ಳಿ’ ಎಂದು ‘ಪ್ರಜಾವಾಣಿ’ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಸಲಹೆ ನೀಡಿದರು.
‘1990ರ ದಶಕದಲ್ಲಿ ಕಲ್ಯಾಣ ಮಂಡಳಿಯ ಶಿಬಿರದಲ್ಲಿ ‘ಒಂದು ಕಾಡಿನ ಕಥೆ’ ನಾಟಕ ಹುಟ್ಟಿತು. ಪರಿಸರದ ಜಾಗೃತಿ ಮೂಡಿಸುವ ಉದ್ದೇಶದಿಂದ ನಾಟಕ ರಚಿಸುವಂತೆ ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಸಲಹೆ ನೀಡಿದ ಪರಿಣಾಮವಾಗಿ ನಾಟಕ ರೂಪುಗೊಂಡಿತು. ಗಿರೀಶ್ ಕಾರ್ನಾಡ್ ನಾಟಕವನ್ನು ಮೆಚ್ಚಿಕೊಂಡಿದ್ದರು’ ಎಂದು ನಾಟಕ ರಚನಾಕಾರ ಬಾ. ಮ. ಬಸವರಾಜಯ್ಯ ನೆನಪಿಸಿಕೊಂಡರು.
ಪರಿಸರ ಪ್ರಜ್ಞೆ ಮೂಡಿಸುವ ‘ಒಂದು ಕಾಡಿನ ಕಥೆ’ ನಾಟಕವನ್ನು ಹೆಗ್ಗೋಡು ರಂಗ ತರಬೇತಿ ಕೇಂದ್ರದ ಪ್ರಜ್ಞಾ ನೀಲಗುಂದ ನಿರ್ದೇಶಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಸಿದ್ದಗಂಗಾ ಶಾಲೆಯ ಮಕ್ಕಳು ನಾಟಕ ಪ್ರದರ್ಶಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ವಿಶ್ವನಾಥ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರತಿಮಾ ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಲ್ಲೇಶ್, ‘ನೀವು-ನಾವು’ ತಂಡದ ಮುಖ್ಯಸ್ಥ ಎಸ್.ಎಸ್. ಸಿದ್ಧರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.