ADVERTISEMENT

ಪೊಲೀಸ್ ಕುಂದು ಕೊರತೆ ಸಭೆ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 5:17 IST
Last Updated 28 ಫೆಬ್ರುವರಿ 2026, 5:17 IST
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗ್ರಾಮದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಕುಂದು ಕೊರತೆ ಸಭೆ ಉದ್ದೇಶಿಸಿ ಪಿಎಸ್‌ಐ ಹಾರೂನ್‌ ಅಖ್ತರ್‌ ಮಾತನಾಡಿದರು
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗ್ರಾಮದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಕುಂದು ಕೊರತೆ ಸಭೆ ಉದ್ದೇಶಿಸಿ ಪಿಎಸ್‌ಐ ಹಾರೂನ್‌ ಅಖ್ತರ್‌ ಮಾತನಾಡಿದರು   

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಗ್ರಾಮದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಕುಂದುಕೊರತೆ ಸಭೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. 

‘ಗ್ರಾಮದಲ್ಲಿ ವಸತಿ, ನಿವೇಶನ ರಹಿತರಿಗೆ ಸೂರು ನೀಡಲು ಜಿಲ್ಲಾಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ವಸತಿ ಸಮಸ್ಯೆ ಪರಿಹರಿಸುವ ಬದಲಿಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತರಾತುರಿಯಲ್ಲಿ ಜಮೀನು ಮಂಜೂರು ಮಾಡಿದ್ದಾರೆ. ಗ್ರಾಮ ಪಂಚಾಯಿತಿಯು ಘಟಕ ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದರೂ ಗಮನ ಹರಿಸಿಲ್ಲ’ ಎಂದು ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸಾರಿಗೆ ನಿಗಮದ ಬಸ್‌ ನಿಲುಗಡೆ, ಗ್ರಾಮದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-25ರ ಅಕ್ಕಪಕ್ಕ ಸುಗಮ ಸಂಚಾರ ಹಾಗೂ ಶಾಲಾ ವಿದ್ಯಾರ್ಥಿಗಳು, ಪಾದಚಾರಿಗಳಿಗೆ ಓಡಾಡಲು ಅನುಕೂಲವಾಗುವಂತೆ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.

ADVERTISEMENT

ಗ್ರಾಮದ ಮುಖಂಡರಾದ ಪಟೇಲ್‌ ಮಂಜುನಾಥ್‌, ಐರಣಿ ಮಹೇಶ್, ರಾಮಚಂದ್ರಾಚಾರ್‌, ಮಂಜುನಾಥ್‌, ರಂಗನಾಥ್‌ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವುದಾಗಿ ಭರವಸೆ ನೀಡಿದರು.

‘ಗ್ರಾಮಸ್ಥರು, ಮಹಿಳೆಯರು, ಯುವಕರು ಏಕಾಏಕಿ ಪ್ರತಿಭಟನೆ, ಧರಣಿ, ರಸ್ತೆತಡೆ ನಡೆಸಿ ಕಾನೂನು ಉಲ್ಲಂಘಿಸಬೇಡಿ. ಯಾವುದೇ ಸಮಸ್ಯೆ ಇದ್ದರೂ ಪೊಲೀಸರ ಗಮನಕ್ಕೆ ತನ್ನಿ. ಬೀಟ್ ಪೊಲೀಸರು ನಿಮ್ಮ ಸಮಸ್ಯೆ ಪರಿಹರಿಸಲು ಸಹಕರಿಸುತ್ತಾರೆ’ ಎಂದು ಪಿಎಸ್‌ಐ ಹಾರೂನ್‌ ಅಖ್ತರ್‌ ಹೇಳಿದರು.

ಸಾರಿಗೆ ಸಂಸ್ಥೆ ಬಸ್‌ ನಿಲುಗಡೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.  

ಪಿಎಸ್ಐ ಜಿ. ಶ್ರೀಪತಿ, ಎಎಸ್ಐ ಶ್ರೀನಿವಾಸ್‌, ಪೊಲೀಸರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.