ADVERTISEMENT

ಕೋವಿಡ್‌ -19: ಕಡಿಮೆಯಾಗುತ್ತಿದೆ ದೂರದೂರಿನ ಪಯಣ

ಅಕ್ಕಪಕ್ಕದ ರಾಜ್ಯಗಳಿಗೆ ಹೋಗುವವರಿದ್ದಾರೆ, ಉತ್ತರ ಭಾರತಕ್ಕಿಲ್ಲ

ಬಾಲಕೃಷ್ಣ ಪಿ.ಎಚ್‌
Published 10 ಮಾರ್ಚ್ 2020, 19:31 IST
Last Updated 10 ಮಾರ್ಚ್ 2020, 19:31 IST
ಗಿರೀಶ್‌
ಗಿರೀಶ್‌   

ದಾವಣಗೆರೆ: ಕೋವಿಡ್‌ 19 ಸೋಂಕಿನ ಕಾರಣದಿಂದಾಗಿ ಉತ್ತರ ಭಾರತದ ರಾಜ್ಯಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಅಕ್ಕಪಕ್ಕದ ರಾಜ್ಯಗಳಿಗೆ ಸದ್ಯ ಹೋಗುತ್ತಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಮಕ್ಕಳಿಗೆ ಪರೀಕ್ಷೆ ಇರುವುದರಿಂದ ಪ್ರವಾಸ ಹೋಗುವವರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಏಪ್ರಿಲ್‌, ಮೇ ತಿಂಗಳಲ್ಲಿ ಪ್ರವಾಸಕ್ಕೆ ಹೋಗಲು ಮಾರ್ಚ್‌ನಲ್ಲಿಯೇ ಪ್ರವಾಸ ಬುಕ್‌ ಮಾಡುತ್ತಾರೆ. ಈ ಬಾರಿ ಈ ರೀತಿ ಮುಂಗಡ ಬುಕ್‌ ಮಾಡುವವರ ಸಂಖ್ಯೆಯೇ ಕಡಿಮೆಯಾಗಿದೆ. ದೆಹಲಿ, ಆಗ್ರಾ, ಶಿಮ್ಲಾ, ಮನಾಲಿಗೆ ಹೋಗುವವರು ಪ್ರತಿವರ್ಷ ಇರುತ್ತಿದ್ದರು. ಈ ಬಾರಿ ಇನ್ನೂ ಬುಕ್‌ ಆಗಿಲ್ಲ ಎನ್ನುತ್ತಾರೆ ಓಯೊ ಟೂರ್ಸ್‌ನ ಗಿರೀಶ್‌.

ಫೆಬ್ರುವರಿ ಕೊನೆಗೆ 14 ಮಂದಿಯ ತಂಡವು ಗುಜರಾತ್‌ಗೆ ಪ್ರವಾಸ ಹೋಗಿ ಬಂದಿದೆ. ಯಾವುದೇ ತೊಂದರೆಯಾಗಿಲ್ಲ. ಕೋವಿಡ್‌ನ ಪರಿಣಾಮ ಪ್ರವಾಸಿಗಳ ಮೇಲೆ ಹೇಗೆ ಬೀರಿದೆ ಎಂಬುದು ಗೊತ್ತಾಗಬೇಕಿದ್ದರೆ ಇನ್ನೊಂದು ತಿಂಗಳು ಕಾಯಬೇಕು ಎನ್ನುವುದು ಅವರ ಅಭಿಪ್ರಾಯ.

ADVERTISEMENT

‘ಕರ್ನಾಟಕದಲ್ಲಿ ಒಂದೋ ಎರಡೋ ಪ್ರಕರಣಗಳು ಪತ್ತೆಯಾಗಿರಬಹುದು. ಇದು ದಾವಣಗೆರೆಯ ಪ್ರವಾಸಿಗರ ಮೇಲೆ ದೊಡ್ಡ ಪರಿಣಾಮ ಬೀರಿಲ್ಲ. ನಮ್ಮ ಟೂರಿಸ್ಟ್‌ ಮೂಲಕ ತೇಕಡಿ, ಮನ್ನಾರ್‌ಗೆ ಪ್ರವಾಸ ಹೋಗಿ ಬರಲಾಗಿದೆ. ನಿನ್ನೆ ಒಂದು ತಂಡ ಊಟಿಗೆ ಹೋಗಿದೆ. ಮುಂದಿನ ವಾರ ಮಹಾರಾಷ್ಟ್ರ, ಗೋವಾಗೆ ಹೋಗಲು ಬುಕ್ಕಿಂಗ್‌ ಆಗಿದೆ’ ಎಂದು ದೀಕ್ಷಿತ್‌ ಟೂರಿಸ್ಟ್‌ನ ಕೆ.ಡಿ. ದೀಕ್ಷಿತ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸುತ್ತಮುತ್ತಲ ಜಿಲ್ಲೆಗಳಿಗೆ, ಅಕ್ಕಪಕ್ಕದ ರಾಜ್ಯಗಳಿಗೆ ಜನ ಹೋಗುತ್ತಿದ್ದಾರೆ. ಉತ್ತರ ಭಾರತ, ವಿದೇಶಗಳಿಗೆ ಮಾತ್ರ ಹೋಗುವವರು ಕಡಿಮೆ. ಕೋವಿಡ್‌ 19 ಬಗ್ಗೆ ದಾವಣಗೆರೆಯ ಜನರು ತಲೆ ಕೆಡಿಸಿಕೊಂಡಿಲ್ಲ’ ಎನ್ನುತ್ತಾರೆ ಅವರು.

ಮಾಧ್ಯಮಗಳಲ್ಲಿ ಬರುತ್ತಿರುವ ‘ಭಾರಿ ಆತಂಕ’ ಎಂಬ ಸುದ್ದಿಗಳನ್ನು ಹೊರತುಪಡಿಸಿ ಈ ಬಗ್ಗೆ ದೊಡ್ಡ ಮಟ್ಟದ ಜಾಗೃತಿ ಕಾರ್ಯಕ್ರಮಗಳು ಆಗಿಲ್ಲ. ನಮ್ಮ ಜನಪ್ರತಿನಿಧಿಗಳು ಅವರದ್ದೇ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ. ಸರ್ಕಾರ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು ಎಂಬುದು ಅವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.