ದಾವಣಗೆರೆ: ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ಸಂಭ್ರಮದ ವಾತಾವರಣ. ದಾಂಪತ್ಯ ಕಲಹದಿಂದ ದೂರವಾಗಿ ವಿಚ್ಚೇದನಕ್ಕೆ ಮುಂದಾಗಿದ್ದ 4 ಜೋಡಿಗಳು ಮತ್ತೆ ಒಂದಾದರು.
ಈ ಮೂಲಕ ಅದಾಲತ್ನಲ್ಲಿ ದಾಂಪತ್ಯ ಜೀವನವನ್ನು ಒಟ್ಟಿಗೆ ಮುಂದುವರಿಸುವ ನಿರ್ಧಾರ ಕೈಗೊಂಡರು. ಅವರ ನಿರ್ಧಾರಕ್ಕೆ ನ್ಯಾಯಾಧೀಶರು, ವಕೀಲರು ಪ್ರೋತ್ಸಾಹಿಸಿ ಸಂತಸಪಟ್ಟರು.
ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಈ ಜೋಡಿಗಳು ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದರು.
ದಂಪತಿಗಳಾದ ಪರಶುರಾಮ–ಇಂದಿರಾ, ವೀರೇಶ್–ಪೂಜಾ, ಪ್ರೀತಂ –ಚಂದನ್, ಮಂಜುನಾಥ– ಕಲ್ಪನಾ, ಸಂದೀಪ–ವಿಶಾಲ ಜೋಡಿಗಳು ಲೋಕದಾಲತ್ನಲ್ಲಿ ಒಂದಾದರು.
4,000 ಪ್ರಕರಣ ಇತ್ಯರ್ಥ:
ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜಿ ಸಂಧಾನದಡಿ ಜಿಲ್ಲೆಯಲ್ಲಿ 4,000 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಲೋಕ ಅದಾಲತ್ನಲ್ಲಿ ಇನ್ನೂ 1000 ಪ್ರಕರಣಗಳು ರಾಜಿಯಾಗಬಹುದು. ಅದಾಲತ್ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳಲ್ಲಿ ಒಂದು. ವ್ಯಾಜ್ಯ ಪೂರ್ವ ಹಂತದಲ್ಲಿ ಬಾಕಿ ಇರುವ ವಿವಾದಗಳು, ಪ್ರಕರಣಗಳನ್ನು ಇತ್ಯರ್ಥಪಡಿಸುವ ವೇದಿಕೆಯಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ, ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ದಶರಥ ಬಿ., 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರವೀಣಕುಮಾರ್, ಪೋಕ್ಸೊ ನ್ಯಾಯಾಧೀಶರಾದ ಶ್ರೀಪಾದ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಹಾಗು ವಕೀಲರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.