ದಾವಣಗೆರೆ: ಆಧುನಿಕತೆಯ ಭರಾಟೆಯಲ್ಲಿ ಕಾಯಕ ಸಮಾಜಗಳು ತಮ್ಮ ಸಾಂಪ್ರದಾಯಿಕ ಕುಲ ಕಸುಬುಗಳನ್ನು ಕೀಳು ಎಂದು ತಿಳಿಯುತ್ತಿದ್ದಾರೆ. ಅವುಗಳನ್ನು ಮರೆತು ಬೇರೆಡೆ ಹೋಗುತ್ತಿದ್ದಾರೆ. ಇದರಿಂದ ನಿರುದ್ಯೋಗ ಸಮಸ್ಯೆ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ ಹೇಳಿದರು.
ವಿನೋಬಾ ನಗರದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಶರಣರೊಂದಿಗೆ ಇದ್ದ ಮಾಚಿದೇವರಿಗೆ ಅಗಾಧ ಜ್ಞಾನವಿತ್ತು. ಅವರು ಪ್ರಕೃತಿ ಮಡಿಲಲ್ಲಿ ಇದ್ದ ಕಾರಣ ಪ್ರಕೃತಿಯನ್ನು ಕಾಪಾಡುವ ಜತೆಗೆ ಸತ್ಯ, ಶುದ್ಧವಾದ ಕಾಯಕ ಮಾಡುತ್ತಿದ್ದರು ಎಂದರು.
ಹಾವೇರಿಯ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕ ತೇಜಪ್ಪ ಎನ್.ಮಡಿವಾಳ ಮಾತನಾಡಿ, ‘ಮಾಚಿದೇವರು ಕಲ್ಯಾಣ ಕ್ರಾಂತಿಯಲ್ಲಿ ವಚನದ ಕಟ್ಟುಗಳನ್ನು ರಕ್ಷಿಸುವ ಮೂಲಕ ಸಮಾಜದ ಎಲ್ಲಾ ಸ್ತರದ ಕಲುಷಿತ ಬಟ್ಟೆ, ಮನಸ್ಸನ್ನು ಸ್ವಚ್ಛ ಮಾಡಿದರು’ ಎಂದು ಸ್ಮರಿಸಿದರು.
ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಎಚ್.ಜಿ. ಉಮೇಶ್, ಪತ್ರಕರ್ತ ಎಂ.ವೈ.ಸತೀಶ್, ಧನಂಜಯ, ವಿಜಯಕುಮಾರ್, ಡೈಮಂಡ್ ಮಂಜುನಾಥ್, ಎಂ. ಮಂಜುನಾಥ್, ಪರಶುರಾಮ್, ಎಂ. ರುದ್ರೇಶ್, ಸುಭಾಷ್, ಬಾತಿಶಂಕರ್, ಎಂ.ಡಿ. ಹನುಮಂತಪ್ಪ, ಅಜಯ್ಕುಮಾರ್, ಕಿಶೋರ್ ಕುಮಾರ್, ನಾಗಮ್ಮ, ಶ್ರೀಧರ್, ಹುಲಿಕಟ್ಟೆ ರಾಮಚಂಂದ್ರಪ್ಪ, ಎನ್. ಓಂಕಾರಪ್ಪ, ಅಂಜಿನಪ್ಪ ಪೂಜಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು.
ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಎಸ್. ಹರ್ಷಕುಮಾರ್, ಎಂ.ಕಿರಣ್ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.